ಮಳವಳ್ಳಿ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಯೊಬ್ಬರು ಕೃತಜ್ಞತೆಯ ಕರಪತ್ರ ಮುದ್ರಿಸಿ ಮತದಾರರಿಗೆ ಹಂಚಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ತಳಗವಾದಿ ಗ್ರಾಮ ಪಂಚಾಯಿತಿ ಟಿ.ಕಾಗೇಪುರ ಕ್ಷೇತ್ರದ ಅಭ್ಯರ್ಥಿ ಪಿ.ನಾಗರಾಜು ಕರಪತ್ರ ಮುದ್ರಿಸಿರುವ ವ್ಯಕ್ತಿ.
2015ರಲ್ಲಿ ಜೆಡಿಎಸ್ ಬೆಂಬಲಿತ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಪಿ.ನಾಗರಾಜು ಈ ಬಾರಿ ಅಧಿಕೃತ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 441 ಮತ ಪಡೆದು 53 ಮತಗಳ ಅಂತರದಿಂದ ಸೋತಿದ್ದರು.
ಕೃತಜ್ಞತಾ ಜಾಥಾ ನಡೆಸಿ ಗ್ರಾಮದ ಪ್ರತಿ ಮನೆಗೂ ತೆರಳಿ ಕರಪತ್ರ ಹಂಚಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಚುನಾವಣೆಯಲ್ಲಿ ಜಯಗಳಿಸಿದ ಅಭ್ಯರ್ಥಿಗೂ ಅಭಿನಂದನೆ ಸಲ್ಲಿಸಿ ಅಭಿವೃದ್ಧಿಗೆ ಬೇಕಾದ ಸಹಕಾರ, ಸಲಹೆ ನೀಡುವುದಾಗಿ ತಿಳಿಸಿದ್ದಾರೆ.
ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಎಚ್.ಡಿ.ದೇವೇಗೌಡ, ಕುಮಾರ ಸ್ವಾಮಿಯಂಥ ರಾಜಕಾರಣಿಗಳೇ ಸೋತಿದ್ದಾರೆ. ಹೀಗಾಗಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಪಕ್ಷ ಸಂಘಟನೆಗೆ ಮುಂದಾಗುವೆ ಎಂದು ಪಿ.ನಾಗರಾಜು ಹೇಳಿದರು.