ಮಂಡ್ಯ ತಾಲ್ಲೂಕಿನ ಕೆರಗೋಡಿನಲ್ಲಿ ನಡೆದ ಭಗವಾಧ್ವಜ ತೆರವು ಘಟನೆಗೆ ಬಿಜೆಪಿಯು ರಾಜ್ಯದಾದ್ಯಂತ ಕಿಚ್ಚು ಹಬ್ಬಿಸಿದೆ. ರಾಷ್ಟ್ರಧ್ವಜ ಮತ್ತು ನಾಡಧ್ವಜಕ್ಕೆ ಮಾತ್ರ ಅನುಮತಿ ನೀಡಲಾಗಿದ್ದರೂ, ಸರ್ಕಾರಿ ಜಾಗದಲ್ಲಿರುವ ಧ್ವಜಸ್ತಂಭದಲ್ಲಿ ಭಗವಾಧ್ವಜ ಹಾರಿಸಿದ್ದಕ್ಕೆ ಅದನ್ನು ತೆರವು ಮಾಡಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದ್ದರೂ, ಪರ–ವಿರೋಧ ವಾದಗಳಿಗೆ ಇಂಬು ನೀಡಿದ ಈ ಪ್ರಕರಣ ರಾಜಕೀಯವಾಗಿಯೂ ಮಹತ್ವ ಪಡೆದುಕೊಂಡು ಬಿಟ್ಟಿತು. ಮಂಡ್ಯ ಜಿಲ್ಲೆಯಲ್ಲಿ ಉತ್ತಮ ನೆಲೆ ಹೊಂದಿರುವ ಜೆಡಿಎಸ್, ಈಗ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದು ಮತ್ತು ಲೋಕಸಭಾ ಚುನಾವಣೆ ಹತ್ತಿರದಲ್ಲಿಯೇ ಇರುವುದು ಪ್ರಕರಣ ಇಷ್ಟು ತೀವ್ರತೆ ಪಡೆಯಲು ಕಾರಣ ಎನ್ನಲಾಗುತ್ತಿದೆ.