ಹಲಗೂರು: ‘ದಿನನಿತ್ಯ ಅರ್ಧ ಗಂಟೆ ಸಮಯ ಲಘು ವ್ಯಾಯಾಮ ಮತ್ತು ಬಿಸಿಲಿಗೆ ಮೈಯೊಡ್ಡುವುದನ್ನು ರೂಢಿಸಿಕೊಂಡರೇ ಮನುಷ್ಯನ ಮೂಳೆಗೆ ಸಂಬಂಧಿಸಿದ ಹಲವು ಕಾಯಿಲೆಗಳನ್ನು ತಡೆಗಟ್ಟಬಹುದಾಗಿದೆ’ ಎಂದು ಮೂಳೆ ಮತ್ತು ಕೀಲು ರೋಗ ತಜ್ಞ ಡಾ.ಮಲವೇಗೌಡ ತಿಳಿಸಿದರು.
ಲಯನ್ಸ್ ಕ್ಲಬ್ ಆಫ್ ಹಲಗೂರು ಮತ್ತು ರಾಮನಗರ ಜಿಲ್ಲಾ ಮೂಳೆ ಮತ್ತು ಕೀಲು ತಜ್ಞರ ಸಂಘದ ವತಿಯಿಂದ ಹಲಗೂರಿನ ಲಯನ್ಸ್ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ಮೂಳೆ ಮತ್ತು ಕೀಲು ರೋಗ ತಪಾಸಣೆ ಮತ್ತು ಮೂಳೆ ಸಾಂದ್ರತೆ (ಬಿ.ಎಂ.ಡಿ) ಪರೀಕ್ಷಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ನೆರಳಿನಲ್ಲಿದ್ದುಕೊಂಡು ಎಷ್ಟೇ ಉತ್ತಮವಾದ ಪೌಷ್ಟಿಕ ಆಹಾರ ಸೇವಿಸಿದರೂ ಸಹ ದೇಹಕ್ಕೆ ‘ಡಿ’ ವಿಟಮಿನ್ ದೊರೆಯಲಾರದು. ಹೀಗಾಗಿ ಬೆಳಿಗ್ಗೆ 8–9ರ ಸಮಯದಲ್ಲಿ ಕನಿಷ್ಠ ಅರ್ಧಗಂಟೆ ಸೂರ್ಯನ ಬಿಸಿಲಿನಲ್ಲಿ ದೇಹವನ್ನು ಕಾಯಿಸಿಕೊಳ್ಳುವುದರಿಂದ ಚರ್ಮದಲ್ಲಿರುವ ಕೊಬ್ಬು ಕರಗಿ ‘ಡಿ’ ವಿಟಮಿನ್ ಆಗಿ ಪರಿವರ್ತನೆ ಆಗಲಿದೆ’ ಎಂದರು
ಮಾನವನ ಆಧುನಿಕ ಜೀವನ ಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಮನುಷ್ಯನ ಮೂಳೆಗಳಲ್ಲಿ ಕ್ಯಾಲ್ಸಿಯಂ ಕಡಿಮೆಯಾಗಿ ಮೂಳೆ ಸವೆತ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಯಾವುದೇ ವ್ಯಕ್ತಿ ತನ್ನ ಪ್ರತಿನಿತ್ಯದ ದಿನಚರಿಯಲ್ಲಿ ತನ್ನ ವಯಸ್ಸಿಗೆ ಹೊಂದುವ ಲಘು ವ್ಯಾಯಾಮಗಳನ್ನು ತಪ್ಪದೇ ಮಾಡುವುದರಿಂದ ಕ್ಯಾಲ್ಸಿಯಂ ವೃದ್ಧಿಗೊಂಡು ಮೂಳೆ ಸಾಂದ್ರತೆ ಉತ್ತಮಗೊಳ್ಳಲಿದೆ.
ಶಿಬಿರದಲ್ಲಿ ಸಲಹೆ ನೀಡಿದ ಡಾ.ಮಲವೇಗೌಡ, ಡಾ.ಮಧುಸೂದನ್, ಡಾ.ಸಚಿನ್, ಡಾ.ಕಿರಣ್ ಕುಮಾರ್, ನಿಖಿಲ್ ಶಾಂತಪ್ಪ ಅವರನ್ನು ಲಯನ್ಸ್ ಕ್ಲಬ್ನಿಂದ ಸನ್ಮಾನಿಸಲಾಯಿತು. ನೂರಕ್ಕೂ ಹೆಚ್ಚು ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಎಚ್.ಎಸ್.ಶ್ರೀನಿವಾಸಾಚಾರಿ, ಖಜಾಂಚಿ ಡಿ.ಎಲ್.ಮಾದೇಗೌಡ, ಎಂ.ಜೆ.ಎಫ್. ಡಾ.ಸಿದ್ದರಾಜು, ಡಾ.ಶಂಸುದ್ದೀನ್, ಎಚ್.ಆರ್. ಪದ್ಮನಾಭ್, ಎನ್.ಕೆ.ಕುಮಾರ್ ಭಾಗವಹಿಸಿದ್ದರು.