ಕೆರಗೋಡು: ಕೊರೊನಾ ಮಧ್ಯೆ ಯೂತ್ ಫಾರ್ ಸೇವಾ ಸಂಘಟನೆಯು ಜಿಲ್ಲೆಯಾದ್ಯಂತ ಸೋಂಕಿತರಿಗೆ ಹೋಮ್ ಕೇರ್ ಕಿಟ್ಗಳನ್ನು ಕಾರ್ಯಕರ್ತರ ಮನೆಗೆ ತಲುಪಿಸುತ್ತಿದೆ.
ಸೋಂಕಿತರು ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆ ನಡೆಸಿ ಹೋಂ ಕ್ವಾರಂಟೈನ್ ಹಾಗೂ ಹೋಮ್ಐಸೊಲೇಷನ್ ಆಗಲು ಬಯಸುವವರಿಗೆ ಸ್ಥಳೀಯ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಟಾಸ್ಕ್ಫೋರ್ಸ್ ಸಮಿತಿ ಸದಸ್ಯರ ಸಹಕಾರದಿಂದ ಈ ಕಾರ್ಯ ನಡೆಯುತ್ತಿದೆ. ಪಲ್ಸ್ಆಕ್ಸಿಮೀಟರ್, ಥರ್ಮಾಮೀಟರ್, ಒಆರ್ಎಸ್ ಪುಡಿ, ಬಾಯಿ ಮುಕ್ಕಳಿಸಲು ಬಳಸುವ ದ್ರಾವಣ, ವೈದ್ಯರ ಸಲಹೆ ಮೇರೆಗೆ 9 ಬಗೆಯ ಮಾತ್ರೆಗಳು ಹಾಗೂ ಅವುಗಳನ್ನು ಬಳಸುವ ಮಾಹಿತಿ ಪತ್ರವನ್ನೊಳಗೊಂಡ ಹೋಮ್ ಕೇರ್ ಕಿಟ್ ಅನ್ನು ವಿತರಿಸಲಾಗುತ್ತಿದೆ. ಜತೆಗೆ, ಕೋವಿಡ್ ಮಾರ್ಗಸೂಚಿ ಪಾಲಿಸಲು ತಿಳಿಸುತ್ತಿದ್ದಾರೆ.
ಐಸೊಲೇಷನ್ ಆದರೆ, ಸೋಂಕು ಇತರರಿಗೆ ಹರಡದೆ ಹಬ್ಬುವುದನ್ನು ತಪ್ಪಿಸಲು ಸಾಧ್ಯ ಎನ್ನುವುದನ್ನು ಮನಗಂಡಿರುವ ಸಂಘಟನೆಯ ಕಾರ್ಯ ಕರ್ತರು ₹ 2,500ಕ್ಕೂ ಹೆಚ್ಚಿನಮೊತ್ತದ ಕಿಟ್ ಅನ್ನು ಮಂಡ್ಯ ಜಿಲ್ಲೆಯ ಸೋಂಕಿತರ ಮನೆಗೆ ಉಚಿತವಾಗಿ ತಲುಪಿಸುತ್ತಿದ್ದಾರೆ. ಜತೆಗೆ ತಜ್ಞ ವೈದ್ಯರಿಂದ ಸೂಕ್ತ ಮಾರ್ಗದರ್ಶನ ನೀಡಿ ಕೊರೊನಾ ಭಯ ಹೋಗಲಾಡಿಸಲು ಶ್ರಮ ವಹಿಸಸುತ್ತಿದ್ದಾರೆ.
ಜಿಲ್ಲೆಯಲ್ಲಿ ಅವಿನಾಶ್, ರವಿ ಕಾಳೇನಹಳ್ಳಿ, ಮಿಥುನ್, ಕೆ.ಆರ್.ಶಶಿಧರ ಈಚಗೆರೆ, ಕೃಷ್ಣ, ಜಗದೀಶ್, ದಿನೇಶ್, ಸೋಮಣ್ಣ, ಮನು, ಅರ್ಜುನ್ ಸೇರಿದಂತೆ ಹಲವು ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ.
ಈ ಕುರಿತು ಮಾತನಾಡಿದ ಯೂತ್ ಫಾರ್ ಸೇವಾ ಜಿಲ್ಲಾ ಘಟಕದ ಸಂಚಾಲಕ ಅವಿನಾಶ್, ಜಿಲ್ಲೆಯಾದ್ಯಂತ 1100ಕ್ಕೂ ಹೆಚ್ಚಿನ ಕಿಟ್ ಅನ್ನು ತಲುಪಿಸಲು ಯೋಜನೆ ರೂಪಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದವರು, ಬಡವರಿಗೆ ಪ್ರತಿ ಮನೆಯಲ್ಲಿಯೂ ಥರ್ಮಾಮೀಟರ್ ಹಾಗೂ ಪಲ್ಸ್ ಆಕ್ಸಿಮೀಟರ್ ಇರುವಂತೆ ಮಾಡಿ ಜೀವ ಉಳಿಸುವುದು ಸಂಘಟನೆಯ ಉದ್ದೇಶ ಎಂದರು.
ಸೋಂಕಿತರಿಗೆ ಹೋಮ್ ಕೇರ್ ಕಿಟ್ ಬೇಕಾದರೆ ಅವಿನಾಶ್ (9686489503), ರವಿ ಕಾಳೇನಹಳ್ಳಿ (9743445262), ಕೆ.ಆರ್.ಶಶಿಧರ ಈಚಗೆರೆ (9380286168) ಅವರನ್ನು ಸಂಪರ್ಕಿಸಬಹುದು.