ಮದ್ದೂರು: ತಾಲ್ಲೂಕಿನ ಹೆಮ್ಮನಹಳ್ಳಿ ಗ್ರಾ.ಪಂ.ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಕ್ ತನ್ವಿರ್ ಆಸೀಫ್ ಭೇಟಿ ನೀಡಿ ಕುಂದು ಕೊರತೆ ಕುರಿತು ಪರಿಶೀಲನೆ ನಡೆಸಿದರು.
ಗ್ರಾ.ಪಂ. ವ್ಯಾಪ್ತಿಯ ಹುಳುಗನಹಳ್ಳಿ ಗ್ರಾಮದಲ್ಲಿ ನಿರ್ಮಿಸಿದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅವರು, ‘ಶಾಲಾ ಕೊಠಡಿ ಹಾಗೂ ನರೇಗಾ ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ ಅಡುಗೆಮನೆ ಹಾಗೂ 15 ನೇ ಹಣಕಾಸು ಯೋಜನೆಯಡಿಯಲ್ಲಿ ನಿರ್ಮಾಣ ಹಂತದಲ್ಲಿರುವ ಶೌಚಾಲಯ ಕಾಮಗಾರಿಗಳನ್ನು ವೀಕ್ಷಿಸಿದರು. ನಂತರ ಹೆಮ್ಮನಹಳ್ಳಿ ಗ್ರಾಮದಲ್ಲಿನ ‘ಕೂಸಿನ ಮನೆ’ ಕಾಮಗಾರಿಯನ್ನು ಪರಿಶೀಲಿಸಿದರು.
ನಂತರ ಹೆಮ್ಮನಹಳ್ಳಿಯ ಗ್ರಾ. ಪಂ ಸಭಾಂಗಣದಲ್ಲಿ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಈ ವೇಳೆ ಸದಸ್ಯ ನಂದೀಶ್ ಗೌಡ ಮಾತನಾಡಿ,‘ಗ್ರಾ.ಪಂ.ನಲ್ಲಿ ನೀರುಗಂಟಿ ಸಿಬ್ಬಂದಿ ಕೊರತೆಯಿದ್ದು, ಅವರನ್ನು ನೇಮಕ ಮಾಡಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ಆಗಬೇಕಾಗಿರುವ ಹಲವು ಅಭಿವೃದ್ಧಿ ಕೆಲಸದ ಕುರಿತು ಗಮನ ಸೆಳೆದು ಕ್ರಮಕ್ಕಾಗಿ ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಸಿಇಒ ಅವರು ‘ಆದಷ್ಟು ಬೇಗ ಅಗತ್ಯ ಕ್ರಮವಹಿಸಲಾಗುವುದು’ ಎಂದು ಭರವಸೆ ನೀಡಿದರು.
ಗ್ರಾ. ಪಂ ಅಧ್ಯಕ್ಷೆ ವೀಣಾ, ಉಪಾಧ್ಯಕ್ಷ ಅಪ್ಪಾಜಿಗೌಡ, ತಾ.ಪಂ.ಇಒ ಸಂದೀಪ್, ನರೇಗಾ ಅಧಿಕಾರಿ ಮಂಜುನಾಥ್, ಪಿಡಿಒ ಲೀಲಾವತಿ, ಗ್ರಾ.ಪಂ. ಸದಸ್ಯರು ಭಾಗವಹಿಸಿದ್ದರು.