ಮಂಡ್ಯ: ಅಂತರ ರಾಷ್ಟ್ರೀಯ ಅಲಯನ್ಸ್ ಸಂಸ್ಥೆ, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ವತಿಯಿಂದ ನಗರದ ಸುಭಾಷ್ ನಗರದ ಟೀ ಬೆಂಚ್ ಟೀ ಸ್ಟಾಲ್ನಲ್ಲಿ ಅಂತರ ರಾಷ್ಟ್ರೀಯ ಚಹಾ ದಿನ ಆಚರಣೆ ಮಾಡಲಾಯಿತು. ಚಹಾ ತಯಾರಿಸುವ ಕಾರ್ಮಿಕರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಅಲಯನ್ಸ್ ಸಂಸ್ಥೆಯ ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು ಮಾತನಾಡಿ ‘ಮಿತವಾಗಿ ಚಹಾ ಸೇವನೆ ಮಾಡುವುದರಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಹಾಗೂ ಆಯಾಸವನ್ನು ನೀಗಿಸಿಕೊಳ್ಳಬಹುದು. ಟೀ ಕುಡಿಯುವುದರಿಂದ ದಣಿದ ಮನಸ್ಸಿಗೆ ಉಲ್ಲಾಸ ಚೇತೋಹಾರಿಕೆ ನೀಡುತ್ತದೆ. ನೀರಿನ ನಂತರ ವಿಶ್ವದಲ್ಲಿ ಅತಿ ಹೆಚ್ಚು ಸೇವಿಸುವ ಪಾನೀಯವೆಂದರೆ ಅದು ಚಹಾ’ ಎಂದರು.
ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್ ಮಾತನಾಡಿ ‘ಚಹಾ ಉದ್ಯಮವು ಸದ್ಯದ ಪರಿಸ್ಥಿತಿಯಲ್ಲಿ ನಿರುದ್ಯೋಗ ಸಮಸ್ಯೆಯನ್ನು ನೀಗಿಸುತ್ತಿದೆ. ಗ್ರಾಮೀಣರಲ್ಲಿ ಆದಾಯದ ಅವಕಾಶಗಳನ್ನು ಸೃಷ್ಟಿಸುತ್ತಿದೆ ಮತ್ತು ಚಹಾ ಉತ್ಪಾದಿಸುವ ದೇಶಗಳಲ್ಲಿ ಆಹಾರ ಭದ್ರತೆಯನ್ನು ಸುಧಾರಿಸುತ್ತಿದೆ’ ಎಂದರು.
ಇದೇ ಸಂದರ್ಭದಲ್ಲಿ ಕಾರ್ಮಿಕರಾದ ಸಂಜಯ್, ಕಿರಣ್ ಅವರನ್ನು ಅಭಿನಂದಿಸಲಾಯಿತು. ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್, ಮುಖಂಡರಾದ ಸೋಮಶೇಖರ್, ಲಿಂಗರಾಜು, ಎಸ್.ಎಂ.ಲೋಕೇಶ್, ಮರಿಗೌಡ, ಜಿ.ಬಿ.ಕುಮಾರ್ ಇದ್ದರು.