ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಮಂಗಲ: ಐಸೊಲೇಷನ್‌ ಕೇಂದ್ರ ಆರಂಭ

ಆದಿಚುಂಚನಗಿರಿ ಮಠದಿಂದ ಬಿಜಿಎಸ್‌ ಸಸ್ಯಕಾಶಿ ಬಳಿ ಸ್ವಾಮೀಜಿ ಉದ್ಘಾಟನೆ
Last Updated 7 ಮೇ 2021, 5:20 IST
ಅಕ್ಷರ ಗಾತ್ರ

ನಾಗಮಂಗಲ: ಜನರು ರೋಗ ಲಕ್ಷಣ ಕಾಣಿಸಿಕೊಂಡ ಕೂಡಲೇ ಆಸ್ಪತ್ರೆಗೆ ತೆರಳಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ರೋಗಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ಪಡೆದರೆ ಶೇ 90ಕ್ಕಿಂತ ಹೆಚ್ಚು ಸೋಂಕಿತರಿಗೆ ಆಮ್ಲಜನಕದ ಅಗತ್ಯ ಇಲ್ಲದೆ ಗುಣಮುಖರಾಗಬಹುದು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ತಾಲ್ಲೂಕಿನ ನೆಲ್ಲಿಗೆರೆ ಕ್ರಾಸ್‌ನ ಬಿಜಿಎಸ್‌ ಸಸ್ಯಕಾಶಿ ಬಳಿಆದಿಚುಂಚನಗಿರಿ ಮಠದ ವತಿಯಿಂದ ಸ್ಥಾಪಿಸಲಾಗಿರುವ ಕೋವಿಡ್ ಐಸೊಲೇಷನ್ ಕೇಂದ್ರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಈಗಾಗಲೇ 140 ಜನರಿಗೆ ಆಮ್ಲಜನಕ ಇರುವ ಬೆಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, 40 ವೆಂಟಿಲೇಟರ್‌ ವ್ಯವಸ್ಥೆ ಮಾಡಲಾಗಿದೆ. ಸುಮಾರು 80 ಹೆಚ್ಚು ವೇಗ ಹೊಂದಿರುವ ಆಮ್ಲಜನಕದ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಬೆಡ್‌ಗಳಿಗೂ‌ ಆಮ್ಲಜನಕ ಕಲ್ಪಿಸುವ ವ್ಯವಸ್ಥೆ ಮಾಡುವುದು ಸಮಸ್ಯೆಯಲ್ಲ. ಆದರೆ, ಎಲ್ಲ ಬೆಡ್‌ಗಳಿಗೆ ಪೂರೈಕೆ‌ ಮಾಡುವಷ್ಟು ಆಮ್ಲಜನಕ ಸಿಗುವ ಖಾತರಿ ಬೇಕಾಗುತ್ತದೆ. ಮನೆಯಲ್ಲಿ ಮಕ್ಕಳು, ವಯಸ್ಸಾದವರಿದ್ದು ಮನೆ ಚಿಕ್ಕದಾಗಿದ್ದರೆ ಅಂಥವರು ಇಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದರು.

ಮಠದ ವತಿಯಿಂದ ಆಸ್ಪತ್ರೆ ಹೊರತು ಪಡಿಸಿ ತಾಲ್ಲೂಕು ಸೇರಿದಂತೆ ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರಿನ ಎರಡು ಕಡೆ ಇಂಥ ಐಸೋಲೇಷನ್ ಕೇಂದ್ರ ತೆರೆಯಲಾಗುತ್ತಿದೆ. ನಮ್ಮ ಜಿಲ್ಲೆಗೆ ತರಬೇಕಾದ ಆಕ್ಸಿಜನ್ ಅನ್ನು ಹೆಚ್ಚು ಪ್ರಮಾಣದಲ್ಲಿ ತಂದರೆ ಸಾವು ನೋವುಗಳನ್ನು ಕಡಿಮೆ ಮಾಡಲು ಸಾಧ್ಯ. ಆದಿಚುಂಚನಗಿರಿ ಆಸ್ಪತ್ರೆಯಲ್ಲಿ 2.5 ಕೆಎಲ್ ಇದ್ದ ಆಮ್ಲಜನಕ ಸಂಗ್ರಹಣಾ ಸಾಮರ್ಥ್ಯವನ್ನು 15ಕ್ಕೆ ಹೆಚ್ಚಿಸಿಕೊಂಡಿದ್ದರೂ ಪೂರೈಕೆ ಕಡಿಮೆಯಿದೆ ಎಂದರು.

ಸಚಿವ ನಾರಾಯಣ ಗೌಡ ಮಾತನಾಡಿ, ಸ್ವಾಮೀಜಿ ಅವರು ಕೋವಿಡ್ ಚಿಕಿತ್ಸೆಗಾಗಿ 100 ಬೆಡ್‌ಗಳ ಐಸೊಲೇಷನ್ ಕೇಂದ್ರ ತೆರೆದಿದ್ದು, ಆಕ್ಸಿಜನ್ ಕೊರತೆಯಾದರೆ ಅದನ್ನು ಪೂರೈಸುವ ನಿಟ್ಟಿನಲ್ಲಿ ಕ್ರಮವಹಿಸಿದ್ದಾರೆ. ಶಾಸಕ ಸುರೇಶ್ ಗೌಡ ಅವರೂ 1,500 ಬೆಡ್‌ಗಳನ್ನು ವ್ಯವಸ್ಥೆ ಮಾಡಿದ್ದಾರೆ. ಆಕ್ಸಿಜನ್ ವ್ಯವಸ್ಥೆಯನ್ನು ಮಾಡಲು ಸೂಚನೆ ನೀಡಿದ್ದೇನೆ. ಜಿಲ್ಲೆಯ ಎಲ್ಲ ಶಾಸಕರೂ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ನಾಗಮಂಗಲ ಉತ್ತಮವಾದ ಸ್ಥಿತಿಯಲ್ಲಿದೆ ಎಂದರು.

ಶಾಸಕ ಸುರೇಶ್ ಗೌಡ ಮಾತನಾಡಿ, ಸ್ವಾಮೀಜಿ ಅವರು ಎ ರೋಗಲಕ್ಷಣ ಹೊಂದಿರುವವರ ಚಿಕಿತ್ಸೆಗೆ 100 ಹಾಸಿಗೆ ಮತ್ತು ಅಗತ್ಯ ಸೌಲಭ್ಯಗಳನ್ನು ವ್ಯವಸ್ಥೆ ಮಾಡಿದ್ದು, ಈಗ ತಾಲ್ಲೂಕಿನಲ್ಲಿ 1,700 ಬೆಡ್‌ಗಳಷ್ಟು ವ್ಯವಸ್ಥೆಯಾಗಿದೆ. ಸ್ವಾಮೀಜಿ ಅವರು ದೂರದೃಷ್ಟಿಯ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಉಪವಿಭಾಗಾಧಿಕಾರಿ ಶಿವಾನಂದ ಮೂರ್ತಿ, ಡಿಎಚ್‌ಒ ಮಂಚೇಗೌಡ, ಪಿಎಸ್‌ಐ ರಾಮಚಂದ್ರ, ಬೆಳ್ಳೂರು ಪ. ಪಂ ಮುಖ್ಯಾಧಿಕಾರಿ ಮಂಜುನಾಥ್, ಆದಿಚುಂಚನಗಿರಿ ಆಸ್ಪತ್ರೆ ಸಿಬ್ಬಂದಿ, ತಾಲ್ಲೂಕು ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT