ಮಂಡ್ಯ: ತಾಲ್ಲೂಕಿನ ಸಾತನೂರು ಗ್ರಾಮದ ಇತಿಹಾಸ ಪ್ರಸಿದ್ಧ ಕಂಬದ ನರಸಿಂಹಸ್ವಾಮಿ ಬ್ರಹ್ಮರಥೋತ್ಸವವು ಸಾವಿರಾರು ಭಕ್ತರ ನಡುವೆ ಭಾನುವಾರ ನಡೆಯಿತು.
ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತ ಭಕ್ತರು ದೇವಾಲಯದ ಎದುರು ಇರುವ ನರಸಿಂಹಸ್ವಾಮಿಯ ಪಾದಕ್ಕೆ ನಮಿಸಿ ನಂತರ ಸ್ವಾಮಿಯ ದರ್ಶನ ಪಡೆದರು. ಮೊದಲ ಬಾರಿಗೆ ಬ್ರಹ್ಮರಥೋತ್ಸವ ನಡೆಯುತ್ತಿರುವ ಕಾರಣ ದನಗಳ ಜಾತ್ರೆ ಮನಸೂರೆಗೊಳಿಸಿತು.
ರಥವನ್ನು ವಿವಿಧ ಹೂಗಳಿಂದ ಸಿಂಗರಿಸಲಾಗಿತ್ತು. ಉಮ್ಮಡಹಳ್ಳಿ, ಸಾತನೂರು, ಚಿಕ್ಕಮಂಡ್ಯ, ಹುಲಿವಾನ, ಗೋಪಾಪುರ, ಕೊಮ್ಮೇರಹಳ್ಳಿ, ಚಿಂದಗಿರಿದೊಡ್ಡಿ, ಬೆಳ್ಳೂಂಡಗೆರೆ, ಶ್ರೀನಿವಾಸಪುರ ಸೇರಿದಂತೆ ವಿವಿಧೆಡೆಯ ಭಕ್ತರು ಬಂದಿದ್ದರು.
ಭಕ್ತರಿಗೆ ಹೋಳಿಗೆ ಊಟವನ್ನು ಪ್ರಸಾದ ರೂಪದಲ್ಲಿ ನೀಡಲಾಯಿತು. ಹರಕೆ ತೀರಿಸಿದ ಭಕ್ತರು ಹಣ್ಣುಜವನ ಎಸೆದರು.
ದೇವಾಲಯದ ಆವರಣದಲ್ಲಿ ದನಗಳ ಜಾತ್ರೆಯೂ ನಡೆಯಿತು. ವಿವಿಧ ಗ್ರಾಮಗಳಿಂದ ಬಂದಿದ್ದ ಜೋಡೆತ್ತುಗಳಿಗಾಗಿ ಶಾಮಿಯಾನ ಸೇರಿಂತೆ ನೆರಳಿಗೆ ವಿಶೇಷ ಶೆಡ್ಗಳನ್ನು ದನಗಳ ಮಾಲೀಕರು ಮಾಡಿಸಿಕೊಂಡಿದ್ದರು. ಬೆಲೆ ಬಾಳುವ ರಾಸುಗಳು ಗಮನ ಸೆಳೆದವು.
ಜಾತ್ರೆಯಲ್ಲಿ ಗೃಹಪಯೋಗಿ ವಸ್ತುಗಳು ಸೇರಿದಂತೆ ಮಕ್ಕಳ ಆಟಿಕೆಯ ಸಾಮಗ್ರಿಗಳು ಹಾಗೂ ತಿನಿಸುಗಳ ಅಂಗಡಿಗಳೂ ಇದ್ದವು.