ನಾಗಮಂಗಲ: ‘ಬೆಂಬಲಿಗರು ಹಾಗೂ ಅಭಿಮಾನಿಗಳ ಒತ್ತಾಸೆ ಮೇರೆಗೆ ಮುಂದಿನ ವಿಧಾನಸಭಾ ಚುನಾವಣೆ ಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿ ಸುತ್ತೇನೆ’ ಎಂದು ಮುಖಂಡ ಎಲ್.ಆರ್. ಶಿವರಾಮೇಗೌಡ ಹೇಳಿದರು.
ತಾಲ್ಲೂಕಿನ ಕದಬಹಳ್ಳಿಯ ಕಾವೇಟಿ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳ ವಾರ ಆಯೋಜಿಸಿದ್ದ ಎಲ್.ಆರ್.ಎಸ್. ಸ್ವಾಭಿಮಾನಿ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ನಾನು ಮಾಜಿ ಪ್ರಧಾನಿ ದೇವೇಗೌಡ, ಕುಮಾರಸ್ವಾಮಿ ಬಗ್ಗೆ ಎಂದಿಗೂ ಲಘುವಾಗಿ ಮಾತನಾಡುವು ದಿಲ್ಲ. ನಮ್ಮನ್ನು 6 ತಿಂಗಳ ಚುನಾವಣೆ ಗಾಗಿ ಸಾಲಗಾರರನ್ನಾಗಿ ಮಾಡಿ ನಂತರ ಕುಮಾರಸ್ವಾಮಿ ತಮ್ಮ ಮಗನಿಗೆ ಟಿಕೆಟ್ ನೀಡಿ ಬಲಿಪಶು ಮಾಡಿದರು. ಈಗ ನನಗೆ ಬುದ್ಧಿ ಹೇಳಲು ಬರುತ್ತಿರುವ ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿದ್ದಾಗ ತಾಲ್ಲೂಕಿಗೆ ನೀಡಿರುವ ಕೊಡುಗೆ ಏನು’ ಎಂದು ಪ್ರಶ್ನಿಸಿದರು.
‘ಕುಮಾರಸ್ವಾಮಿ ನನ್ನ ಬಗ್ಗೆಕುಹಕದ ಮಾತು ಆಡುವುದನ್ನು ನಿಲ್ಲಿಸಬೇಕು. ನನ್ನ ಅಧಿಕಾರಾವಧಿಯಲ್ಲಿ ಯಾರ ಬಳಿಯಾದರೂ ಒಂದು ರೂಪಾಯಿ ಪಡೆದು ಭ್ರಷ್ಟಾಚಾರ ಮಾಡಿದ್ದರೆ ನನ್ನನ್ನು ಬೆಂಬಲಿಸಬೇಡಿ. ತಾಲ್ಲೂಕಿನ ಜನರ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಯಾವ ಪಂಚರತ್ನಗಳು ಕೆಲಸಕ್ಕೆ ಬರುವುದಿಲ್ಲ. ತಾಲ್ಲೂಕಿಗೆ ಜನಪರವಾದ ಕೆಲಸ ಮಾಡುವ, ಜನರಿಗಾಗಿ ಸ್ಪಂದಿಸುವ ಮುಖಂಡರ ಅವಶ್ಯಕತೆಯಿದೆ’ ಎಂದರು.
ಮುಖಂಡರಾದ ಜುಬೇರ್ ಮುಂದಾಳತ್ವದಲ್ಲಿ ನೂರಾರು ಮುಸ್ಲಿಂ ಯುವಕರು ಶಿವರಾಮೇಗೌಡರ ಸ್ವಾಭಿಮಾನಿ ಬಣಕ್ಕೆ ಸೇರ್ಪಡೆಯಾದರು.
ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದರಿಂದ ಹಾಸ್ಯ ರಸಸಂಜೆ ನಡೆಯಿತು. ಸಾವಿರಾರು ಜನರಿಗೆ ಮಾಂಸದೂಟ ವ್ಯವಸ್ಥೆ ಮಾಡಲಾಗಿತ್ತು.
‘ನಾನು ಯಾರಿಗೂ ಮೋಸ ಮಾಡಿಲ್ಲ. ಅಂಬರೀಷಣ್ಣನ ಪತ್ನಿ ಸುಮಲತಾ ಅವರು ಸೆರಗೊಡ್ಡಿ ಬೇಡಿಕೊಂಡಾಗ ಜಿಲ್ಲೆಯ ಜನರು ಯಾವ ಕುಮಾರಸ್ವಾಮಿಯನ್ನೂ ಲೆಕ್ಕಕ್ಕೆ ಇಟ್ಟುಕೊಳ್ಳಲಿಲ್ಲ. ಈ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ’ ಎಂದು ಶಿವರಾಮೇ ಗೌಡ ಕಣ್ಣೀರಿಟ್ಟರು.