ಮಂಡ್ಯ: ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪರ ವಕಾಲತ್ತು ವಹಿಸಿ ಅವರಿಗೆ ನಿರೀಕ್ಷಣಾ ಜಾಮೀನು ಕೊಡಿಸಿದ ಕಾರಣಕ್ಕೆ ವಕೀಲ ಡಿ.ಚಂದ್ರೇಗೌಡ ಅವರನ್ನು ಶ್ರೀರಂಗ ಪಟ್ಟಣ ತಾಲ್ಲೂಕು ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಸ್ಥಾನದಿಂದ ಗುರುವಾರ ವಜಾಗೊಳಿಸಲಾಗಿದೆ.
ಹನುಮಾನ್ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಭಟ್ ಅವರ ವಿರುದ್ಧ ದೂರು ದಾಖಲಾಗಿತ್ತು. ಅವರ ಪರವಾಗಿ ನ್ಯಾಯಾಲಯ ದಲ್ಲಿ ವಕಾಲತ್ತು ವಹಿಸಿದ್ದ ಚಂದ್ರೇಗೌಡ ನಿರೀಕ್ಷಣಾ ಜಾಮೀನು ಮಂಜೂರು ಮಾಡಿಸಿದ್ದರು.
‘ಮುಸ್ಲಿಂ ಮಹಿಳೆ ವಿರುದ್ಧ ಪ್ರಚೋದ ನಾಕಾರಿಯಾಗಿ ಮಾತನಾಡಿರುವ ವ್ಯಕ್ತಿ ಪರವಾಗಿ ವಕಾಲತ್ತು ವಹಿಸಿರುವುದು ಕಾನೂನು ಘಟಕದ ನಿಂಬಂಧನೆಗಳಿಗೆ ವಿರುದ್ಧವಾಗಿದೆ. ಹೀಗಾಗಿ ತಾಲ್ಲೂಕು ಘಟಕದ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿದೆ’ ಎಂದು ಕಾನೂನು ವಿಭಾಗ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಸ್.ಗೌರಿಶಂಕರ್ ತಿಳಿಸಿದ್ದಾರೆ.