ಮೇಲುಕೋಟೆ: ಮಂಡ್ಯ– ಮೇಲುಕೋಟೆ ಮಾರ್ಗದ ಅರಕನಕೆರೆಯ ರೈತ ಪ್ರತಾಪ್ ಅವರ ಮೇಲೆ ಹೊಲದ ಬಳಿಯೇ ಚಿರತೆ ದಾಳಿಮಾಡಿದೆ. ಚಿರತೆ ದಾಳಿಯ ವಿಷಯ ತಿಳಿದು ಪರಿಶೀಲಿಸಲು ಹೋದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೂ ಚಿರತೆ ದಾಳಿ ನಡೆಸಿದೆ.
ಚಿರತೆ ದಾಳಿಯ ವಿಷಯ ತಿಳಿದ ನಾಗಮಂಗಲ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ, ಪಾಂಡವಪುರ ತಾಲ್ಲೂಕು ಅರಣ್ಯಾಧಿಕಾರಿ ಪುಟ್ಟಸ್ವಾಮಿ, ಅರಣ್ಯವೀಕ್ಷಕ ಮರಿಸ್ವಾಮಿ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ಅವಿತಿದ್ದ ದಾಳಿ ನಡೆಸಿದ್ದು, ಮರಿಸ್ವಾಮಿ ಗಾಯಗೊಂಡಿದ್ದಾರೆ.
ಪ್ರತಾಪ್ ಮತ್ತು ಮರಿಸ್ವಾಮಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿರತೆ ಓಡಾಡುವ ಸ್ಥಳದಲ್ಲಿ ಬೋನು ಇರಿಸಿದ್ದು, ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಗಿದೆ. ದಾಳಿಗೊಳಗಾದ ರೈತರಿಗೆ ಪರಿಹಾರ ನೀಡಲು ಸರ್ಕಾರಕ್ಕೆ ವರದಿ ನೀಡಲಾಗಿದ್ದು, ಮೇಲುಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ ಮಾಹಿತಿ ನೀಡಿದ್ದಾರೆ.