ಮಂಡ್ಯ: ನೀವೇಶನ ದಾಖಲೆ ನೀಡಲು ಲಂಚ ಪಡೆಯುತ್ತಿದ್ದ ತಾಲ್ಲೂಕಿನ ಬೇಲೂರು ಗ್ರಾಮ ಪಂಚಾಯಿತಿ ಗ್ರೇಡ್–1 ಕಾರ್ಯದರ್ಶಿ ದಯಾನಂದ ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದರು.
ಶ್ರೀರಾಮ ಬಡಾವಣೆಯಲ್ಲಿ 30X40 ಅಳತೆಯ ನಿವೇಶನ ಖರೀದಿಸಿದ್ದ ಮಂಜುನಾಥ್ ಎಂಬುವವರು ಪತ್ನಿ ಹಾಗೂ ಅತ್ತೆ ಹೆಸರಿಗೆ ಜಂಟಿ ಖಾತೆ ಮಾಡಿಸಲು ಅಗತ್ಯವಿದ್ದ ದಾಖಲೆಗಳನ್ನು ನೀಡಲು ಕಾರ್ಯದರ್ಶಿ ₹40 ಸಾವಿರ ಲಂಚ ಕೇಳಿದ್ದರು. ನಂತರ ₹35 ಸಾವಿರಕ್ಕೆ ಒಪ್ಪಿದ್ದರು.
ಮುಂಗಡವಾಗಿ ₹5 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಗ್ರಾಮದ ಕೆಲವರು ದೂರುದಾರರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿ, ಅಧಿಕಾರಿಯನ್ನು ಬಂಧಿಸಬಾರದು ಎಂದು ಒತ್ತಾಯಿಸಿದರು.