ಮಂಡ್ಯ: ರಂಜಾನ್ ರಜೆಗೆಂದು ಸಂಬಂಧಿಕರ ಮನೆಗೆ ಬಂದಿದ್ದ 2 ಕುಟುಂಬಗಳ ಐವರು ವಿಶ್ವೇಶ್ವರಯ್ಯ ನಾಲೆಯಲ್ಲಿ ಆಟವಾಡುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲ್ಲೂಕಿನ ದೊಡ್ಡಕೊತ್ತಗೆರೆ ಗ್ರಾಮದ ಬಳಿ ಮಂಗಳವಾರ ನಡೆದಿದೆ.
ಬೆಂಗಳೂರಿನ ನೀಲಸಂದ್ರ ಬಡಾವಣೆಯ ಅನೀಷಾ ಬೇಗಂ(34), ಅವರ ಮಗಳು ಮೆಹತಾಬ್ (10), ಅಮಾನುಲ್ಲಾ ಎಂಬುವವರ ಮಕ್ಕಳಾದ ತಸ್ಮಿಯಾ (22), ಅಫೀಕಾ (22), ಅಶ್ರಕ್ (28) ಮೃತಪಟ್ಟಿದ್ದರೆ.
ರಂಜಾನ್ ಆಚರಣೆ ಮುಗಿನ ನಂತರ ತಾಲ್ಲೂಕಿನ ಹಲ್ಲೇಗೆರೆಯ ಸಂಬಂಧಿಕರ ಮನೆಗೆ ಬಂದಿದ್ದರು. ದೊಡ್ಡಕೊತ್ತಗೆರೆ ಬಳಿಯ ವಿಶ್ವೇಶ್ವರಯ್ಯ ನಾಲೆ ಬಳಿ ಆಟವಾಡುತ್ತಿದ್ದಾಗ 10 ವರ್ಷದ ಮಗು ಮೆಹತಾಬ್ ನೀರಿನ ಸುಳಿಗೆ ಸಿಲುಕಿ ಮುಳುಗಿದೆ. ಮಗುವನ್ನು ರಕ್ಷಿಸಲು ತೆರಳಿದ ಇತರರೂ ಸುಳಿಗೆ ಸಿಲುಕಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಬಂದ ಬಸರಾಳು ಠಾಣೆ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಮೂರು ಮೃತದೇಹಗಳನ್ನು ಹೊರಕ್ಕೆ ತೆಗೆದಿದ್ದಾರೆ. ಇನ್ನೂ ಎರಡು ಮೃತದೇಹಗಳ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ನೀರಿನ ಹರಿವಿನ ವೇಗ ಹೆಚ್ಚಾಗಿದ್ದು ಮೃತದೇಹಗಳು ಕೊಚ್ಚಿ ಹೋಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸರಾಳು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ