ಮಂಡ್ಯ: ಮಳವಳ್ಳಿ ತಾಲ್ಲೂಕು ಮುತ್ತತ್ತಿ ಅರಣ್ಯ ಪ್ರದೇಶದ ಕಾವೇರಿ ನದಿಯಲ್ಲಿ ಈಜಾಡಲು ತೆರಳಿದ್ದ ತಂದೆ ಮಗ ಸೇರಿ ನಾಲ್ವರು ನೀರಿನ ಮಡುವಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಮೈಸೂರಿನ ಗುಂಡೂರಾವ್ ನಗರ ನಿವಾಸಿಗಳಾದ ನಾಗೇಶ್ (45), ಅವರ ಪುತ್ರ ಭರತ್ (17), ಮಹಾದೇವ (14), ಗುರು (32) ಮೃತಪಟ್ಟವರು. ಮೈಸೂರಿನ ಕನಕನಗರ ನಿವಾಸಿಗಳಾದ ಭಾಗ್ಯಮ್ಮ ಹಾಗೂ ರಾಜು ದಂಪತಿ ಮುತ್ತತ್ತಿಯ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಆಯೋಜಿಸಿದ್ದರು.
ಮಂಗಳವಾರ ಬೆಳಿಗ್ಗೆ 50 ಮಂದಿಯ ತಂಡ ಮುತ್ತತ್ತಿಗೆ ಬಂದಿತ್ತು. ಬೆಳಿಗ್ಗೆ ತಿಂಡಿ ತಿಂದ ನಂತರ ಹಲವರು ಈಜಾಡಲು ಕಾವೇರಿ ನದಿಗೆ ಇಳಿದಿದ್ದರು. ಈಜಾಡುವ ಸಂದರ್ಭದಲ್ಲಿ ಮಹಾದೇವ ಮಡುವಿನಲ್ಲಿ ಮುಳುಗಿದರು. ಆತನನ್ನು ರಕ್ಷಿಸಲು ತಂದೆ ನಾಗೇಶ್ ಪ್ರಯತ್ನಿಸಿದರು, ಆದರೆ, ಅವರೂ ಮಡುವಿನಲ್ಲಿ ಸಿಲುಕಿದರು. ರಕ್ಷಣೆಗೆ ತೆರಳಿದ ಭರತ್, ಗುರು ಕೂಡ ಮುಳುಗಿದರು. ಮಡುವಿನಿಂದ ಹೊರಬರಲಾಗದೇ ನಾಲ್ವರೂ ಜಲಸಮಾಧಿಯಾದರು.
ನಾಗೇಶ್ ಹಾಗೂ ಭರತ್ ಮೃತದೇಹ ನೀರಿನಿಂದ ಹೊರತೆಗೆಯಲಾಗಿದೆ. ಮಹಾದೇವ, ಗುರು ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ