ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್.ಪೇಟೆ: ಕುಂಟುತ್ತಾ ಸಾಗುತ್ತಿದೆ ಮನೆ ನಿರ್ಮಾಣ ಕಾಮಗಾರಿ

ಸ್ವಂತ ಮನೆ ಹೊಂದುವ ಕನಸು ನನಸಾಗುವುದೇ? ವಿಳಂಬ ದೋರಣೆಯಿಂದ ಕಂಗಾಲು
Published 21 ಜುಲೈ 2023, 7:21 IST
Last Updated 21 ಜುಲೈ 2023, 7:21 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ಕೊಳಚೆ ನಿರ್ಮೂಲನಾ ಮಂಡಳಿ ಪುರಸಭಾ ವ್ಯಾಪ್ತಿಯಲ್ಲಿ ನಿರ್ಮಿಸುತ್ತಿರುವ ಮನೆಗಳ ನಿರ್ಮಾಣ ಕಾಮಗಾರಿ ಕುಂಟತ್ತಾ ಸಾಗುತ್ತಿದ್ದು ಸ್ವಂತ ಮನೆ ಹೊಂದಬೇಕು ಎಂಬ ಕನಸು ಹೊತ್ತಿದ್ದ ಸಾಮಾನ್ಯ ಜನರ ಬದುಕು ಅತಂತ್ರವಾಗಿದೆ.

ಕೆ.ಸಿ.ನಾರಾಯಣಗೌಡರ ಅವಧಿಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ 500 ಮನೆಗಳ ನಿರ್ಮಾಣಕ್ಕೆ ಅನುಮೋದನೆ ದೊರೆತಿತ್ತು. ಅವುಗಳಲ್ಲಿ ಆರಂಭಿಕವಾಗಿ  75 ಮನೆಗಳ ನಿರ್ಮಾಣಕ್ಕೆ ಕಾಮಗಾರಿಯೂ ಆರಂಭವಾಗಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ನಿರ್ಮಾಣ ಕಾರ್ಯವು ಆಮೆ ಗತಿಯಲ್ಲಿ ನಡೆಯುತ್ತಿದೆ.

ತಲಾ ₹ 6 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣಗೊಳ್ಳಲಿದ್ದು ಫಲಾನುಭವಿಗಳು ಕೂಡ ತಲಾ ₹ 1 ಲಕ್ಷ ವಂತಿಕೆ ಪಾವತಿಸಿದ್ದಾರೆ. ಆದರೆ ಮನೆಗಳ ನಿರ್ಮಾಣ ಕೆಲಸ ಸಮರ್ಪಕವಾಗಿ ನಡೆಯದ ಕಾರಣ ಫಲಾನುಭವಿಗಳು ಆತಂಕ ಎದುರಿಸುತ್ತಿದ್ದಾರೆ. 500 ಮನೆಗಳ ಪೈಕಿ  ಹೊಸಹೊಳಲು ಗ್ರಾಮದಲ್ಲಿ 68 ಮನೆ, ಕೆ.ಆರ್.ಪೇಟೆಯಲ್ಲಿ 7 ಮನೆಗಳ ನಿಮಾಣ ಕಾಮಗಾರಿಯು ಆಮೆ ವೇಗದಲ್ಲಿ ನಡೆಯುತ್ತಿದೆ.

ಹಲವು ಮನೆಗಳಿಗೆ ಇನ್ನೂ ತಳಪಾಯ ಕಾಮಗಾರಿಯೇ ಆಗಿಲ್ಲ, ಕೆಲವು ಮನೆಗಳು ಚಾವಣಿವರೆಎ ಕಾಮಗಾರಿ ಮುಗಿದಿದೆ,  ಇನ್ನೂ ಕೆಲವು ಮನೆಗಳು ಗೋಡೆಯ ಮಟ್ಟಕ್ಕೆ ಮಾತ್ರ ನಿರ್ಮಾಣವಾಗಿದೆ. ಸರ್ಕಾರ ನಿಗದಿಪಡಿಸಿರುವಂತೆ ಪ್ರತೀ ಫಲಾನುಭವಿಯು ₹ 99 ಸಾವಿರ ಪಾವತಿ ಮಾಡಿದರೆ ಸಹಾಯ ಧನ ಹಾಗೂ ಬ್ಯಾಂಕ್ ಸಾಲ ಸೌಲಭ್ಯ ದೊರೆಯುತ್ತದೆ. ₹  5 ಲಕ್ಷ ಹಣವನ್ನು ಸರ್ಕಾರವೇ ಒದಗಿಸಿಕೊಡುತ್ತದೆ. ಮನೆಗಳ ನಿರ್ಮಾಣ ಕಾಮಗಾರಿಯ ಜವಾಬ್ದಾರಿಯನ್ನು ಹೊಂಬಾಳೆ ಕಂಪನಿ ವಹಿಸಿಕೊಂಡಿದೆ.

ಸ್ವಂತ ಮನೆಯನ್ನು ಹೊಂದಲೇಬೇಕೆಂಬ ಕನಸಿನೊಂದಿಗೆ ಹಳೆಯ ಮನೆಯನ್ನು ಕೆಡವಿಸಿ ಸಾಲ-ಸೋಲ ಮಾಡಿ ₹ 1ಲಕ್ಷ ವಂತಿಕೆ ವಂದಿಸಿದ್ದೇವೆ. ಆದರೆ ಈ ಕಾಮಗಾರಿಯ ಗುಣಮಟ್ಟ ಮತ್ತು ವಿಳಂಬ ಕಂಡರೆ ನಮ್ಮ ಕನಸು ನನಸಾಗುವ ಲಕ್ಷಣ ಕಾಣಿಸುತ್ತಿಲ್ಲ’ ಎಂದು ಫಲಾನುಭವಿಗಳಾದ ಸತೀಶ್, ವಿಶ್ವನಾಥ್, ಪೂಜಾ, ನೇತ್ರ ಆತಂಕ ವ್ಯಕ್ತಪಡಿಸುತ್ತಾರೆ.

‘ಒಂದೂವರೆ ವರ್ಷ ಸಮೀಪಿಸುತ್ತಿದ್ದರೂ ಮನೆಯ ಕಾಮಗಾರಿಯು ಸಂಪೂರ್ಣಗೊಳ್ಳುವ ವಿಶ್ವಾಸವೇ ಕಾಣುತ್ತಿಲ್ಲ. ಮನೆಗಳ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಹೊಂಬಾಳೆ ಕಂಪನಿಯು ಮನೆಗಳ ಕಾಮಗಾರಿಯನ್ನು ಸಂಪೂರ್ಣಗೊಳಿಸದೇ ಬಡಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಶೀಘ್ರ ಕಾಮಗಾರಿ ಮುಗಿಸದಿದ್ದರೆಪುರಸಭೆ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು’ ಎಂದು  ಪುರಸಭಾ ಸದಸ್ಯ ಎಚ್.ಆರ್.ಲೋಕೇಶ್ ಎಚ್ಚರಿಕೆ ನೀಡಿದರು.

‘ಮನೆ ನಿರ್ಮಾಣದ ಪೂರ್ಣ ಜವಾಬ್ದಾರಿಯನ್ನು ಕೊಳಚೆ ನಿರ್ಮೂಲನಾ ಮಂಡಳಿ ವಹಿಸಿಕೊಂಡಿದೆ. ಪುರಸಭೆಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಆದರೂ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳಿಗೆ ಕಾಮಗಾರಿ ಮುಗಿಸುವಂತೆ ತಿಳಿಸಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಬಸವರಾಜು ತಿಳಿಸಿದರು. ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಸಂಪರ್ಕಕ್ಕೆ ಸಿಗಲಿಲ್ಲ.

ವಂತಿಕೆ ಪಾವತಿಸಿದರೂ ಮುಗಿಯದ ಕಾಮಗಾರಿ ಮನೆ ಕನಸು; ಸಂಕಷ್ಟದಲ್ಲಿ ಶ್ರಮಿಕ ನಿವಾಸಿಗಳು ಜನರತ್ತ ತಿರುಗಿ ನೋಡದ ಅಧಿಕಾರಿ, ಜನಪ್ರತಿನಿಧಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT