ಶೃಂಗೇರಿ: ಇಲ್ಲಿನ ಪವಿತ್ರ ಧಾರ್ಮಿಕ ಕ್ಷೇತ್ರ ಶೃಂಗೇರಿಯ ಜೀವನದಿ ತುಂಗಾ ನದಿಗೆ ಪಟ್ಟಣದಿಂದ ತ್ಯಾಜ್ಯದ ನೀರು ಮಿಶ್ರಣಗೊಂಡು ಕಲುಷಿತವಾಗುತ್ತಿದೆ. ಕಸವನ್ನು ನದಿಯ ಬಳಿ ಬಿಸಾಡುತ್ತಿರುವುದರಿಂದ ಕಲುಷಿತಗೊಳ್ಳುತ್ತಿದೆ.
ವರ್ಷಕ್ಕೆ ಸುಮಾರು 30 ರಿಂದ 40 ಲಕ್ಷದಷ್ಟು ಪ್ರವಾಸಿಗರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದು, ತುಂಗೆ ಹೊಳೆಯಲ್ಲಿ ಗಮನ ಸೆಳೆಯುವ ಮೀನುಗಳಿಗೆ ಮಂಡಕ್ಕಿ ಚೆಲ್ಲಿ ಅದರ ಪ್ಲಾಸ್ಟಿಕ್ ಕವರ್ ಅನ್ನು ಅಲ್ಲಿಯೇ ಬಿಟ್ಟು ಹೋಗುತ್ತಿರುವುದರಿಂದ ನದಿ ಮಲಿನಗೊಳ್ಳುತ್ತಿದೆ. ಈ ಕುರಿತು ಶಾರದ ಮಠ ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ್ದರೂ ಏನು ಪ್ರಯೋಜನವಾಗಿಲ್ಲ.
ಶಾರದ ಮಠದ ಹಾಗೂ ಪಟ್ಟಣ ಪಂಚಾಯಿತಿಯಿಂದ ₹5.75 ಲಕ್ಷ ವೆಚ್ಚದಲ್ಲಿ ಸುಲಭ ಶೌಚಾಲಯ ಹಾಗೂ ಸ್ನಾನಘಟ್ಟಗಳನ್ನು ನಿರ್ಮಿಸಿದ್ದರೂ ಭಾರತೀತೀರ್ಥ ಸೇತುವೆಯಲ್ಲಿ ಬಟ್ಟೆ ಒಣಗಿಸುವ, ತಲೆಬಾಚಿಕೊಳ್ಳುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಆದರೆ ಸ್ಥಳೀಯ ಆಡಳಿತ ಇವುಗಳನ್ನು ನಿಯಂತ್ರಿಸುವ ಕೆಲಸ ಮಾಡಿಲ್ಲ. ಎಂಬುದು ಸ್ಥಳೀಯರ ಆರೋಪ.
ಗಾಂಧೀ ಮೈದಾನದಲ್ಲಿ ‘ಕಸವನ್ನು ಹಾಕಬೇಡಿ’ ಎಂದರೂ ಪ್ರತಿನಿತ್ಯ ಕಸ ಬೀಳುತ್ತಲೇ ಇದೆ. ಮಲೆನಾಡಿನಲ್ಲಿ ಕೂಲಿ ಕಾರ್ಮಿಕರ ಕೊರತೆ ಇದ್ದು, ಬಯಲು ಸೀಮೆಯಿಂದ ಶೃಂಗೇರಿಗೆ ಕಾರ್ಮಿಕರು ಬರುತ್ತಿದ್ದು, ಬಾಡಿಗೆ ಮನೆಯಲ್ಲಿ ಇಲ್ಲೆ ನೆರೆಯೂರಿದ್ದಾರೆ. ತುಂಗಾನದಿಯ ಸಮೀಪವಿರುವ ಬಯಲಿನಲ್ಲಿಯೇ ಮಲ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.
ಪಟ್ಟಣ ಪಂಚಾಯಿತಿ ಹಲವು ಬಾರಿ ಪೋಲಿಸರ ಸಹಾಯ ಪಡೆದು ಅವರಿಗೆ ಎಚ್ಚರಿಕೆ ನೀಡಿದರೂ ಪ್ರಯೋಜನವಿಲ್ಲ. ಬಾಡಿಗೆ ನೀಡಿದವರ ಮನೆಯಲ್ಲಿ ಶೌಚಾಲಯ ವ್ಯವಸ್ಥೆ ಇದ್ದರೂ ಅದನ್ನು ಬಳಸುತ್ತಿಲ್ಲ. ಗಾಂಧೀ ಮೈದಾನದಲ್ಲಿ ಸುಲಭ ಶೌಚಾಲಯವಿದ್ದರೂ ಯಾರೂ ಬರುವುದಿಲ್ಲ ಎಂಬುದು ಸ್ಥಳೀಯರ ದೂರು.
‘ಪಟ್ಟಣ ಪಂಚಾಯಿತಿ ವತಿಯಿಂದ ಇಂತಹವರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಆಗ ತುಂಗೆ ಯಾವ ಗೊಂದಲವಿಲ್ಲದೇ ಪ್ರಶಾಂತಳಾಗಿ ಹರಿಯಬಲ್ಲಳು’ ಎಂಬುದು ಪ್ರಜ್ಞಾವಂತ ನಾಗರೀಕರ ಅನಿಸಿಕೆ.
ಅಂಕಿ ಅಂಶ
2.30 ಲಕ್ಷ ಗ್ಯಾಲನ್ ನೀರನ್ನು ಶೃಂಗೇರಿಗೆ ಪ್ರತಿನಿತ್ಯ ಪೂರೈಕೆ ಮಾಡಲಾಗುತ್ತಿದೆ.
135 ಲೀಟರ್
ಒಂದು ಮನೆಗೆ ಬೇಕಾಗುವ ನೀರಿನ ಪ್ರಮಾಣ.
ರಾಘವೇಂದ್ರ
ರಾಜ್ಯ ಸರ್ಕಾರದಲ್ಲಿ ಅನುದಾನದ ಕೊರತೆ
ತುಂಗಾನದಿಗೆ ಕೊಳಚೆ ನೀರು ಹೋಗದಂತೆ ಎಸ್.ಟಿ.ಪಿ ಮಾದರಿಯಲ್ಲಿ ನಾಲ್ಕಾರು ಸಣ್ಣ ಘಟಕವನ್ನು ನಿರ್ಮಿಸಿ ತುಂಗಾನದಿಯ ನೀರನ್ನು ಶುದ್ಧೀಕರಿಸುವ ಯೋಜನೆಗೆ ಅತೀ ಶೀಘ್ರದಲ್ಲಿ ಚಾಲನೆಗೆ ಸರ್ವೆ ಪೂರ್ಣಗೊಂಡಿದ್ದು , ರಾಜ್ಯ ಸರ್ಕಾರದಲ್ಲಿ ಅನುದಾನದ ಕೊರತೆ ಇರುವುದರಿಂದ ನಾವು ವಿವಿಧ ಇಲಾಖೆಗಳಿಂದ ಅನುದಾನವನ್ನು ತರಲು ಪ್ರಯತ್ನಿಸುತ್ತಿದ್ದೇವೆ. ತುಂಗಾನದಿಯ ನೀರಿನ ಶುದ್ಧತೆಯ ಬಗ್ಗೆ ಗುರುತರವಾದ ಜವಾಬ್ದಾರಿ ನಮ್ಮ ಮೇಲಿದೆ. ಸಾರ್ವಜನಿಕರು ನಮ್ಮ ಜತೆ ಕೈಜೋಡಿಸಬೇಕು.
ಡಾ. ಲಕ್ಷ್ಮೀ ಎನ್ ಪ್ರಸಾದ್, ಅಧ್ಯಕ್ಷರು. ಪಟ್ಟಣ ಪಂಚಾಯಿತಿ
ಪ್ರವಾಸಿಗರ ಚಟುವಟಿಕೆಗೆ ಕಡಿವಾಣ ಅಗತ್ಯ
‘ಹೊಳೆಯಲ್ಲಿ ಈಜಿದರೆ ಅಪಾಯ’ ಎಂಬ ಎಚ್ಚರಿಕೆ ಫಲಕ ಹಾಕಿದ್ದರೂ ಪ್ರವಾಸಿಗರು ಈಜುತ್ತಾರೆ. ಹಲವು ಪ್ರವಾಸಿಗರು ತುಂಗಾನದಿಯಲ್ಲಿಯೇ ಸ್ನಾನವನ್ನು ಪೂರೈಸಿಕೊಂಡು ದೇವಸ್ಥಾನಕ್ಕೆ ತೆರಳುತ್ತಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.