ಮಂಡ್ಯ: ಆದಿಚುಂಚನಗಿರಿ ಮಠದ ವತಿಯಿಂದ ₹ 1 ಕೋಟಿ ವೆಚ್ಚದಲ್ಲಿ ರೂಪಿಸಲಾಗಿರುವ ಕೋವಿಡ್ ಪರೀಕ್ಷಾ ಪ್ರಯೋಗಾಲಯಕ್ಕೆ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಬುಧವಾರ ಚಾಲನೆ ನೀಡಿದರು.
‘ಜಿಲ್ಲೆಗೆ ತೀರಾ ಅಗತ್ಯವಿದ್ದ ಕೋವಿಡ್ ಲ್ಯಾಬ್ ಆದಿಚುಂಚನಗಿರಿ ವೈದ್ಯಕೀಯ ಕಾಲೇಜು ಆವರಣದಲ್ಲಿ ಆರಂಭವಾಗಿರುವುದು ಸಂತಸದ ವಿಷಯ. ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ಆಸಕ್ತಿಯಿಂದ ಕೇವಲ 15 ದಿನದಲ್ಲಿ ಪ್ರಯೋಗಾಲಯ ತಲೆ ಎತ್ತಿದೆ. ಇನ್ನು ಮುಂದೆ ಜಿಲ್ಲೆಯ ಜನರು ಭಯಪಡಬೇಕಿಲ್ಲ’ ಎಂದು ಸಚಿವರು ಹೇಳಿದರು.
‘ಗಂಟಲು ದ್ರವ ಸಂಗ್ರಹಿಸಿ ವರದಿಗಾಗಿ ಎರಡು ದಿನ ಕಾಯಬೇಕಾಗಿತ್ತು. ಈಗ ಮತ್ತೊಂದು ಪ್ರಯೋಗಾಲಯ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಕೇವಲ 24 ಗಂಟೆಯೊಳಗೆ ವರದಿ ಬರಲಿದೆ. ಪರೀಕ್ಷೆಗೆ ಬೇಕಾದ ಹಣಕಾಸಿನ ಸೌಲಭ್ಯವನ್ನು ಸರ್ಕಾರವೇ ಭರಿಸಲಿದೆ’ ಎಂದರು.
ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ ‘ವಿಶ್ವಕ್ಕೆ ಕಂಟಕವಾಗಿರುವ ಕೊರೊನಾ ಸೋಂಕು ತಡೆಗಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಜಿಲ್ಲೆಯಲ್ಲಿ ಸೋಂಕು ಹೆಚ್ಚುತ್ತಿರುವ ಅಗತ್ಯತೆಯನ್ನು ಅರಿತು ಮಠದಿಂದಲೇ ಪ್ರಯೋಗಾಲಯ ಆರಂಭಿಸಲಾಗಿದೆ. ಲ್ಯಾಬ್ನಲ್ಲಿ ಆಧುನಿಕ ಸೌಲಭ್ಯಗಳಿದ್ದು ಜಿಲ್ಲೆಯ ಜನರು ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.