ಪಾಂಡವಪುರ (ಮಂಡ್ಯ ಜಿಲ್ಲೆ): ನವಿಲುಗರಿಯಿಂದ ತಯಾರಿಸಲಾಗಿದ್ದ ಹಾರ ಹಾಕಿಸಿಕೊಂಡಿದ್ದಕ್ಕೆ ಮೇಲುಕೋಟೆ ಕ್ಷೇತ್ರದ ಕರ್ನಾಟಕ ಸರ್ವೋದಯ ಪಕ್ಷದ ಘೋಷಿತ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸೋಮವಾರ ಅರಣ್ಯ ಇಲಾಖೆ ನೋಟಿಸ್ ನೀಡಿದೆ.
ಕ್ಷೇತ್ರದಲ್ಲಿ ಜನಮನ ಪಾದಯಾತ್ರೆ ನಡೆಸುವ ವೇಳೆ ಮಾರ್ಚ್ 12ರಂದು ಪಟ್ಟಣದ ವಿಶ್ವೇಶ್ವರಯ್ಯ ನಗರದ ಅಭಿಮಾನಿಗಳು ಅವರಿಗೆ ನವಿಲುಗರಿ ಹಾರ ಹಾಕಿದ್ದರು. ನಂತರ ಹಾರ ಹಾಕಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
‘ರಾಷ್ಟ್ರೀಯ ಪಕ್ಷಿಯ ಗರಿ ಬಳಸಿ ಹಾರ ಸಿದ್ಧಪಡಿಸಿರುವುದು ಕಾನೂನು ವಿರೋಧಿಯಾಗಿದೆ, ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಹಾರವನ್ನು ಪರಿಶೀಲನೆಗೆ ಹಾಜರುಪಡಿಸಬೇಕು’ ಎಂದು ವಲಯ ಅರಣ್ಯಾಧಿಕಾರಿ ಪುಟ್ಟಸ್ವಾಮಿ ನೋಟಿಸ್ನಲ್ಲಿ ಸೂಚಿಸಿದ್ದಾರೆ.