ಮಂಡ್ಯ: ಹಕ್ಕು ಪತ್ರ ಸಿಗದಿರುವ ನಗರ ವ್ಯಾಪ್ತಿಯ ಕೊಳೆಗೇರಿಗಳ ಕುಟುಂಬಕ್ಕೆ ಶೀಘ್ರ ಅನುಕೂಲ ಮಾಡಿಕೊಡಲಾಗುವುದು. ಕೂಡಲೇ ಹಕ್ಕುಪತ್ರ ವಿತರಣೆಗೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ಶಾಸಕ ಎಂ.ಶ್ರೀನಿವಾಸ್ ಹೇಳಿದರು.
ನಗರದಲ್ಲಿರುವ ಕೆರೆಯಂಗಳದ ವಿವೇಕಾನಂದ ಬಡಾವಣೆಯಲ್ಲಿನ ಗಾಡಿ ಕಾರ್ಖಾನೆ ಮತ್ತು ಶ್ರಮಿಕ ನಗರ ನಿವಾಸಿಗಳಿಗೆ ವಸತಿ ಇಲಾಖೆ ಮತ್ತು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಆಯೋಜಿಸಿದ್ದ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಹಕ್ಕುಪತ್ರ ವಿತರಿಸುವ ಮೂಲಕ ಶ್ರಮಿಕರ ಬಹುದಿನಗಳ ಬೇಡಿಕೆ ಈಡೇರಿಸಿದಂತಾಗಿದೆ. ಹಕ್ಕಪತ್ರಗಳನ್ನು ವಿತರಿಸಬೇಕು ಎಂಬುದು ನನ್ನ ಆಸೆ ಕೂಡ ಆಗಿತ್ತು. ಈಗ ಅದು ಈಡೇರಿದಂತಾಗಿದೆ. ಕಳೆದ ಎರಡು ದಿನಗಳ ಹಿಂದೆ ಮಂಡ್ಯ ನಗರದ ಒಂದನೇ ವಾರ್ಡ್ನ ನಾಲಬಂದವಾಡಿಯ ನೂರಾರು ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ’ ಎಂದರು.
‘ಈಗ ಮಂಡ್ಯದ ಗಾಡಿ ಕಾರ್ಖಾನೆ ಮತ್ತು ಶ್ರಮಿಕ ನಗರ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿದ್ದೇವೆ. ಮಂಡ್ಯದಲ್ಲಿರುವ ಇತರ ಸ್ಲಂಗಳಿಗೂ ಕರ್ನಾಟಕ ಕೊಳಗೇರಿ ಮಂಡಳಿ ವತಿಯಿಂದ ಹಕ್ಕುಪತ್ರ ವಿತರಿಸಲು ಕ್ರಮ ವಹಿಸಲಾಗಿದೆ. ಈ ಬಗ್ಗೆ ನಿವಾಸಿಗಳು ಯಾವುದೇ ಆತಂಕ ಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ’ ಎಂದು ಭರವಸೆ ನೀಡಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿ ಸಹಾಯಕ ಎಂಜಿನಿಯರ್ ಹರೀಶ್, ‘ಗಾಡಿ ಕಾರ್ಖಾನೆ ಮತ್ತು ಶ್ರಮಿಕ ನಗರ ನಿವಾಸಿಗಳಿಗೆ ಇಂದು ಅತ್ಯಂತ ಸಂತಸದ ದಿನ. ಅವರು ಹಲವು ವರ್ಷಗಳಿಂದ ನಡೆಸಿದ ಹೋರಾಟಕ್ಕೆ ಅವರಿಗೆ ಫಲ ನೀಡಿದೆ’ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ನಾಗೇಶ್, ಮುಖಂಡರಾದ ಸಿದ್ದರಾಜು, ಪೂರ್ಣಿಮಾ, ಸಿದ್ದರಾಜು ಭಾಗವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.