ಮದ್ದೂರು: ಪಟ್ಟಣದ ಸಂಜಯ ಚಿತ್ರಮಂದಿರದಲ್ಲಿ ‘ಭರಾಟೆ’ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಈ ಚಿತ್ರಮಂದಿರಕ್ಕೆ ಚಿತ್ರದ ನಾಯಕ ನಟ ಶ್ರೀಮುರಳಿ, ನಾಯಕ ನಟಿ ಶ್ರೀಲೀಲಾ, ನಿರ್ದೇಶಕ ಚೇತನ್ ಕುಮಾರ್ ಭಾನುವಾರ ಭೇಟಿ ನೀಡಿದ್ದರು.
ಶ್ರೀಮುರಳಿ ಬಂದಿರುವ ವಿಷಯ ತಿಳಿಯುತ್ತಿದ್ದಂತೆ ಅಭಿಮಾನಿಗಳು ಅವರನ್ನು ಸುತ್ತುವರಿದರು. ಚಿತ್ರಮಂದಿರ ದಲ್ಲಿದ್ದ ಅಭಿಮಾನಿಗಳು ಹೊರಗೆ ಬಂದು ತಮ್ಮ ನೆಚ್ಚಿನ ನಾಯಕ ನಟನನ್ನು ಕಣ್ತುಂಬಿಕೊಂಡರು. ಶ್ರೀಮುರಳಿ ಅವರಿಗೆ ಹೂವಿನ ಹಾರಗಳನ್ನು ಹಾಕಿ ಸಂಭ್ರಮಿಸಿದರು.
ಅಭಿಮಾನಿಗಳ ಒತ್ತಾಯದ ಮೇರೆಗೆ ಶ್ರೀಮುರಳಿ ಅವರು ‘ಭರಾಟೆ’ ಚಿತ್ರದ ಹಾಡೊಂದಕ್ಕೆ ತಮ್ಮ ಫಾರ್ಚುನರ್ ಕಾರಿನ ಮೇಲೆ ನಿಂತು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಶ್ರೀಲೀಲಾ, ಚೇತನ್ ಕುಮಾರ್ ಅವರು ಚಿತ್ರಮಂದಿರದೊಳಗೆ ಹೋಗಿ ಅಭಿಮಾನಿಗಳೊಂದಿಗೆ ಸ್ವಲ್ಪ ಹೊತ್ತು ಚಿತ್ರವನ್ನು ವೀಕ್ಷಿಸಿದರು.
ಭರಾಟೆ ಚಿತ್ರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಎಲ್ಲ ಕಡೆಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಎಂದು ಶ್ರೀಮುರಳಿ ತಿಳಿಸಿದರು.