ಮಂಡ್ಯ: ಬೇಬಿ ಬೆಟ್ಟದಲ್ಲಿ ಕಲ್ಲು ಹೊಡೆಯುವುದಕ್ಕೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಕಾವೇರಿ ಭೋವಿ ಸಂಘದ ಸದಸ್ಯರು, ದಲಿತ ಸಂಘಟನೆ ಸದಸ್ಯರು ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಕನ್ನಂಬಾಡಿ ಕಟ್ಟೆ ನಿರ್ಮಾಣದ ಸಂದರ್ಭದಲ್ಲಿ ಪಾಂಡವಪುರ ತಾಲ್ಲೂಕಿನ ಕಾವೇರಿಪುರಕ್ಕೆ ಬಂದು ನೆಲೆಸಿದ 18–20ಕುಟುಂಬಗಳು ಇಂದು 400 ಕುಟುಂಬಗಳಾಗಿವೆ. ಕಲ್ಲು ಕುಳಿ, ಸೈಜು ಮಾಡುವುದೇ ಕುಲಕಸುಬಾಗಿರುವ ನಮಗೆ, ಇದನ್ನು ಬಿಟ್ಟರೆ ಬೇರೆ ಕೆಲಸ ಮಾಡಲು ಬರುವುದಿಲ್ಲ. ಇದರಿಂದಲೇ ಕುಟುಂಬ ನಿರ್ವಹಣೆ ಮಾಡುತ್ತಿದ್ದು, ಒಂದು ತಿಂಗಳಿನಿಂದ ಕಲ್ಲು ಹೊಡೆಯದಂತೆ ನಿರ್ಬಂಧ ವಿಧಿಸಿರುವುದರಿಂದ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭೋವಿ ಮುಖಂಡರಾದ ಕರ್ಣ, ಶಂಕರ, ರಮೇಶ್, ಗಣೇಶ್, ಈಶ್ವರ, ಮಂಜೇಶ, ಮುರುಗೇಶ, ದಲಿತ ಮುಖಂಡರಾದ ಎಂ.ಬಿ.ಶ್ರೀನಿವಾಸ್, ಚಂದ್ರು, ತಾಪಂ ಸದಸ್ಯ ಗೋವಿಂದಯ್ಯ ಇದ್ದರು.