ಮಂಡ್ಯ: ಗ್ರಾಮೀಣ ಕ್ರೀಡೆ ಕಬಡ್ಡಿ ಆಗಿದ್ದು, ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಮನೋಭಾವ ಯುವಕರಲ್ಲಿ ಹೆಚ್ಚಬೇಕು ಎಂದು ಕಾಂಗ್ರೆಸ್ ಮುಖಂಡ ಡಾ.ಕೃಷ್ಣ ಸಲಹೆ ನೀಡಿದರು.
ನಗರದ ಹೊಸಹಳ್ಳಿ ಶ್ರೀರಾಮ ಮಂದಿರದ ಆವರಣದಲ್ಲಿ ಮಾರಿಗುಡಿ ಗೆಳೆಯರ ಬಳಗ,ರಾಮನಹಳ್ಳಿ ಮತ್ತು ಹೊಸಹಳ್ಳಿ ಗ್ರಾಮಸ್ಥರ ಸಹಯೋಗದಲ್ಲಿ ಬಿಸಿಲು ಮಾರಮ್ಮ ದೇವಿಯ ಹಬ್ಬದ ಅಂಗವಾಗಿ ಆಯೋಜಿಸಿದ್ದ ವಿಶ್ವೇಶ್ವರಯ್ಯ ಕಪ್–2022 ಒಂದನೇ ವರ್ಷದ ವಿಭಾಗ ಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಅವರು ಮಾತನಾಡಿದರು.
ದೇಸಿ ಕ್ರೀಡೆ ಕಬಡ್ಡಿಯು ಎಲ್ಲರ ಮನಗೆದ್ದಿದೆ. ಜೊತೆಗೆ ಭಾರತದ ಹೆಮ್ಮೆಯ ಕ್ರೀಡೆಯೂ ಆಗಿದೆ. ಯುವ ಸಮೂಹ ಕಬಡ್ಡಿ ಆಡುವ ಹಾಗೂ ಕಲಿಯುವ ಆಸಕ್ತಿ ಬೆಳೆಸಿಕೊಳ್ಳಬೇಕು. ಇದರಿಂದ ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಗ್ರಾಮೀಣ ಭಾಗದಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜಿಸುವುದು ಉತ್ತಮ ಬೆಳವಣಿಗೆ ಆಗಿದೆ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು ಮಾತನಾಡಿ, ಮೈಸೂರು ವಿಭಾಗ ಮಟ್ಟದಲ್ಲಿ 50 ತಂಡಗಳು ಭಾಗವಹಿಸಿರುವುದು ಹೆಮ್ಮೆಯ ವಿಷಯವಾಗಿದೆ. ಇದೇ ರೀತಿ ಕ್ರೀಡೆಗೆ ಪ್ರೋತ್ಸಾಹ ಸಿಗಬೇಕು ಎಂದರು.
ಕಬಡ್ಡಿ ಪಂದ್ಯಾವಳಿಯಲ್ಲಿ ಹುಳ್ಳೇನಹಳ್ಳಿ ತಂಡ ಪ್ರಥಮ ಬಹುಮಾನ ಗೆದ್ದುಕೊಂಡಿತು. ದ್ವಿತೀಯ ಬಹುಮಾನವನ್ನು ಮಂಡ್ಯ ಮಧು ಫ್ರೆಂಡ್ಸ್ ಹಾಗೂ ತೃತೀಯ ಬಹುಮಾನವನ್ನು ಹೊಸಹಳ್ಳಿ ಟೈಗರ್ಸ್, ನಾಲ್ಕನೇ ಸ್ಥಾನವನ್ನು ಬೆಸಗರಹಳ್ಳಿ ತಂಡ ಪಡೆದುಕೊಂಡವು. ಉತ್ತಮ ರೈಡರ್ ಆಗಿ ದರ್ಶನ್ ಹುಳ್ಳೇನಹಳ್ಳಿ, ಉತ್ತಮ ಹಿಡಿತಗಾರ ಶರತ್, ಸರ್ವೋತ್ತಮ ಆಟಗಾರ ದಿವಾಕರ್ ಹುಳ್ಳೇನಹಳ್ಳಿ ಅವರಿಗೆ ತಲಾ ಎರಡು ಸಾವಿರ ರೂಪಾಯಿಯನ್ನು ನೀಡಲಾಯಿತು.
ಹಾಪ್ಕಾಮ್ಸ್ ನಿರ್ದೇಶಕ ಹೊಸಹಳ್ಳಿ ನಾಗೇಶ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಶಿವಲಿಂಗೇಗೌಡ,ನಗರಸಭೆ ಸದಸ್ಯರಾದ ಮೀನಾಕ್ಷಿ, ಪವಿತ್ರಾ ಬೋರೇಗೌಡ ಡಾ.ಪಾವನ, ಕೃಷ್ಣ, ಮುಖಂಡರಾದ ಇಂಡುವಾಳು ಸಚ್ಚಿದಾ ನಂದ, ನಾರಾಯಣ್, ಹೊಸಹಳ್ಳಿ ಶೇಖರ್, ಪ್ರಸನ್ನ, ಬೋರಪ್ಪ, ರುದ್ರಪ್ಪ, ಅಮ್ಜದ್ಪಾಷ ಭಾಗವಹಿಸಿದ್ದರು.