‘ಕಷ್ಟಪಟ್ಟು ಚೆಂಡು ಹೂ ಮತ್ತು ಕುಂಬಳ ಬೆಳೆದಿದ್ದೇನೆ. ಭೂಮಿ ಉಳುಮೆ, ಪೈರು, ಕೊಟ್ಟಿಗೆ ಗೊಬ್ಬರ, ಸೀಮೆ ಗೊಬ್ಬರ, ಕೂಲಿ ಸೇರಿ ಒಂದು ಲಕ್ಷ ರೂಪಾಯಿಗೂ ಹೆಚ್ಚು ಖರ್ಚು ಮಾಡಿದ್ದೇನೆ. ನಿರೀಕ್ಷೆಗೂ ಮೀರಿ ಫಸಲು ಬಂದಿದೆ. ಚೆಂಡು ಹೂ ಇಷ್ಟೊತ್ತಿಗೆ ಮೂರು ಕೊಯ್ಲು ಮುಗೀಬೇಕಿತ್ತು. ಕುಂಬಳ ಎರಡು ಬಾರಿ ಕಟಾವು ಆಗಬೇಕಿತ್ತು. ಆದರೆ ಎರಡೂ ಫಸಲನ್ನು ಕೇಳುವವರಿಲ್ಲ. ಚೆಂಡು ಹೂ ಉದುರುತ್ತಿವೆ; ಕುಂಬಳ ಕೊಳೆಯುತ್ತಿವೆ. ಬೆಳೆಗೆ ಮಾಡಿದ ಸಾಲ ಹೇಗೆ ತೀರಿಸಲಿ ಎಂಬ ಚಿಂತೆಯಾಗಿದೆ’ ಎಂದು ನಂದೀಶ್ ಕಣ್ಣೀರು ಹಾಕುತ್ತಾರೆ.