ಮದ್ದೂರು: ಪೊಲೀಸರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು, ಎಕ್ಸ್ಪ್ರೆಸ್ ವೇ ಸಮೀಪ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ಮಡಿಕೇರಿ ತಾಲ್ಲೂಕು ಅರಪಟ್ಟು ಗ್ರಾಮದ ಮುತ್ತಪ್ಪ ಅವರನ್ನು ಶುಕ್ರವಾರ ತಡರಾತ್ರಿ ಬೆದರಿಸಿ 75 ಗ್ರಾಂ. ಚಿನ್ನಾಭರಣ ಕಸಿದು ಪರಾರಿಯಾಗಿದ್ದಾರೆ.
ಸಂಚಾರ ವಿಭಾಗದ ಎಡಿಜಿಪಿ ಅಲೋಕ್ಕುಮಾರ್ ಅವರು ಹೆದ್ದಾರಿ ಸುರಕ್ಷತೆ ಪರಿಶೀಲನೆ ನಡೆಸಿದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ.
ಒಳಾಂಗಣ ವಿನ್ಯಾಸಕರಾದ ಮುತ್ತಪ್ಪ ಬೆಂಗಳೂರಿನ ಆಸ್ಪತ್ರೆಗೆ ತೆರಳಿ ಇನೋವಾ ಕಾರ್ನಲ್ಲಿ ಮರಳುತ್ತಿದ್ದರು. ನಸುಕಿನ 2.30ರ ವೇಳೆಗೆ ಹೊರವಲಯದ ಐಶ್ವರ್ಯ ಶಾಲೆಯ ಬಳಿ ಸರ್ವೀಸ್ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದರು.
‘ನಾವು ಪೊಲೀಸರು’ ಎಂದು ಪರಿಚಯಿಸಿಕೊಂಡ ಮೂವರು, ‘ನೀವು ಮದ್ಯಪಾನ ಮಾಡಿದ್ದೀರೋ ಇಲ್ಲವೋ ಎಂಬುದನ್ನು ಚೆಕ್ ಮಾಡಬೇಕಿದೆ’ ಎಂದು ತಿಳಿಸಿದ್ದಾರೆ. ನಂತರ ಡ್ರ್ಯಾಗನ್ ತೋರಿಸಿ ಬೆದರಿಸಿದ್ದಾರೆ. ಮುತ್ತಪ್ಪ ಪ್ರತಿರೋಧ ವ್ಯಕ್ತಪಡಿಸಿದಾಗ ಕತ್ತು, ಕೈಗೆ ತಿವಿದಿದ್ದಾರೆ. ಕೊರಳಲ್ಲಿದ್ದ 60 ಗ್ರಾಂ. ಚಿನ್ನದ ಸರ ಹಾಗೂ 15 ಗ್ರಾಂ. ಚಿನ್ನದ ತಾಯಿತವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ‘ಗಸ್ತಿನಲ್ಲಿದ್ದ ನಾವು ಸ್ಥಳಕ್ಕೆ ಬಂದಾಗ ಈ ವಿಷಯ ತಿಳಿಯಿತು. ನಾವೇ ಮುತ್ತಪ್ಪ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದೆವು’ ಎಂದು ಪೊಲೀಸರು ತಿಳಿಸಿದರು.