ನಾಗಮಂಗಲ: ಸೋಮವಾರ ಸಂಜೆ ಸುರಿದ ಗುಡುಗು ಮಿಂಚಿನ ಮಳೆಯಲ್ಲಿ ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟಿದ್ದು, ಮತ್ತಿಬ್ಬರಿಗೆ ಗಂಭೀರವಾಗಿ ಗಾಯಗಳಾಗಿವೆ.
ತಾಲ್ಲೂಕಿನ ಬೆಳ್ಳೂರು ಹೋಬಳಿಯ ತಿಗಳರಹಳ್ಳಿಯ ಬಳಿ ಇರುವ ಗುಡ್ಡದಲ್ಲಿ ಮೂವರು ಆಡು ಮೇಯಿಸಲು ಹೋಗಿದ್ದಾಗ ಸಂಜೆ 4.30ರ ಸಮಯದಲ್ಲಿ ಮಳೆ ಬಂದಿದೆ. ಗುಡ್ಡದಲ್ಲೇ ಇರುವ ಆಲದ ಮರವೊಂದರ ಕೆಳಗೆ ನಿಂತುಕೊಂಡಿದ್ದ ವೇಳೆ ಸಿಡಿಲು ಬಡಿದು ಗ್ರಾಮದ ಪ್ರತಾಪ್ (24) ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಅಲ್ಲದೇ, ಮೃತನ ತಂದೆ ಕಾಂತರಾಜು (50) ಮತ್ತು ಸೋದರ ಪ್ರಶಾಂತ್ (20) ಗಂಭೀರವಾಗಿ ಗಾಯಗೊಂಡಿದ್ದು, ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಡಿಲು ಬಡಿತಕ್ಕೆ ಎರಡು ಮೇಕೆಗಳು ಸ್ಥಳದಲ್ಲೇ ಮೃತಪಟ್ಟಿವೆ.
ಸ್ಥಳಕ್ಕೆ ಬೆಳ್ಳೂರು ಗ್ರಾಮಾಂತರ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ದಯಾನಂದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.