ಪ್ರತಿಷ್ಠೆಯ ಕಣವಾಗಿದ್ದ ಮಂಡ್ಯ ಕ್ಷೇತ್ರದ ಹಳ್ಳಿಹಳ್ಳಿಗಳಲ್ಲಿ ಜನರು ಸೋಲು– ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಕೆಲವರು ಹಣ, ಹಸು, ಎಮ್ಮೆ, ಆಡು, ಕುರಿ, ಕೋಳಿಯನ್ನು ಪಣಕ್ಕಿಟ್ಟಿದ್ದಾರೆ. ಮತದಾನ ಮುಗಿಯುತ್ತಿದ್ದಂತೆ ಹಲವು ಆಂತರಿಕ ಸಮೀಕ್ಷೆಗಳು ಜನರ ಕುತೂಹಲ ಕೆರಳಿಸಿವೆ. ಜೆಡಿಎಸ್ ಪಕ್ಷ ತನ್ನದೇ ಸಮೀಕ್ಷೆ ಬಿಡುಗಡೆ ಮಾಡಿದ್ದು ನಿಖಿಲ್ ಗೆಲುವಿಗೆ ಕಾರಣವಾದ ಅಂಶಗಳ ಮೇಲೆ ಬೆಳಕು ಚೆಲ್ಲಿದೆ. ಅದರಂತೆ ಪಕ್ಷೇತರ ಅಭ್ಯರ್ಥಿ ಸುಮಲತಾ ಬೆಂಬಲಿಗರೂ ತಮ್ಮದೇ ಸಮೀಕ್ಷೆ ಬಿಡುಗಡೆ ಮಾಡಿದ್ದಾರೆ. ಅವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಬೆಟ್ಟಿಂಗ್ ಹಾವಳಿಗೆ ಕಾರಣವಾಗಿವೆ.