ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಜಿಲ್ಲೆಯಲ್ಲಿ 47,019 ವಿದ್ಯಾರ್ಥಿಗಳಿಗೆ ‘ನಿಧಿ’

ಈವರೆಗೆ ₹ 23.53 ಕೋಟಿ ಶಿಷ್ಯವೇತನ ಜಮೆ
Last Updated 5 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಮೈಸೂರು: ರಾಜ್ಯ ಸರ್ಕಾರದಿಂದ 2021–22ನೇ ಸಾಲಿನಿಂದ ಹೊಸದಾಗಿ ಜಾರಿಗೊಳಿಸಿರುವ ‘ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಯೋಜನೆ’ಯಡಿ ಈವರೆಗೆ 47,019 ವಿದ್ಯಾರ್ಥಿಗಳಿಗೆ ₹ 23.53 ಕೋಟಿ ಶಿಷ್ಯವೇತನ ಜಮೆಯಾಗಿದೆ.

ಕೃಷಿಕರ ಮಕ್ಕಳಿಗೆ ಶಿಕ್ಷಣಕ್ಕಾಗಿ ಆರ್ಥಿಕವಾಗಿ ನೆರವಾಗುವ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯೋಜನೆ ಅನುಷ್ಠಾನಗೊಳಿಸಿದ್ದಾರೆ. ಇದಕ್ಕೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿದ್ಯಾರ್ಥಿಗಳು ಶಿಷ್ಯವೇತನ ಕೋರಿ ಆನ್‌ಲೈನ್‌ನಲ್ಲಿ ನಿಗದಿತ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಪೈಕಿ ಆಯ್ಕೆಯಾದವರಿಗೆ ಶಿಷ್ಯವೇತನವನ್ನು ಕಲ್ಪಿಸಲಾಗಿದೆ.

ರೈತರ ಮಕ್ಕಳ ಉನ್ನತ ಶಿಕ್ಷಣ ಪ್ರೋತ್ಸಾಹಿಸುವ ಯೋಜನೆ ಇದಾಗಿದೆ. ಮೆಟ್ರಿಕ್‌ ನಂತರದ ಹೆಚ್ಚಿನ ಶಿಕ್ಷಣಕ್ಕಾಗಿ ರಾಜ್ಯದಲ್ಲಿ ಮಾನ್ಯತೆ ಪಡೆದ ಯಾವುದೇ ಶಿಕ್ಷಣ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವ ರೈತರ ಮಕ್ಕಳಿಗೆ ಅವರ ಕೋರ್ಸ್‌ಗಳಿಗೆ ಅನುಗಣವಾಗಿ ₹ 2,500 ರಿಂದ ₹ 11ಸಾವಿರದವರೆಗೆ ಶಿಷ್ಯವೇತನ ಕೊಡಲಾಗುತ್ತದೆ. ಇತರ ವಿದ್ಯಾರ್ಥಿವೇತನಗಳನ್ನು ಪಡೆದವರು ಕೂಡ ರೈತ ವಿದ್ಯಾನಿಧಿ ಶಿಷ್ಯವೇತನಕ್ಕೆ ಅರ್ಹರಾಗಿರುತ್ತಾರೆ. ವಿದ್ಯಾರ್ಥಿಯ ತಂದೆ ಅಥವಾ ತಾಯಿ ರೈತರ ಗುರುತಿನ ಸಂಖ್ಯೆ (ಎಫ್‌ಐಡಿ) ಹೊಂದಿರಬೇಕಾಗುತ್ತದೆ.

ಪ್ರೋತ್ಸಾಹ ನೀಡಲು:ಈ ಶಿಷ್ಯವೇತನ ಯೋಜನೆಯನ್ನು 8ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ರೈತ ಕುಟುಂಬದ ಬಾಲಕಿಯರಿಗೆ ಕೂಡ ವಿಸ್ತರಿಸಿ ಈಚೆಗೆ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಅದರಂತೆ ಪ್ರತಿ ವಿದ್ಯಾರ್ಥಿನಿಗೆ ₹ 2ಸಾವಿರ ಶಿಷ್ಯವೇತನ ದೊರೆಯಲಿದೆ. ಈ ಮೂಲಕ ಮಹಿಳಾ ಶಿಕ್ಷಣಕ್ಕೆ ಪ್ರೋತ್ಸಾಹ ಕೊಡಲಾಗುತ್ತಿದೆ.

ಜಿಲ್ಲೆಯಲ್ಲಿ 3.34 ಲಕ್ಷ ರೈತರು ಕೃಷಿ ಇಲಾಖೆಯಲ್ಲಿ ನೋಂದಾಯಿಸಿದ್ದಾರೆ. ಅವರ ಮಕ್ಕಳು ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಈವರೆಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಜನ ಪಡೆದವರಲ್ಲಿ ಮೈಸೂರು ತಾಲ್ಲೂಕಿನವರು ಹೆಚ್ಚಿದ್ದಾರೆ (27,185). ಎಚ್‌.ಡಿ. ಕೋಟೆ ತಾಲ್ಲೂಕಿನವರು ಕೊನೆಯ ಸ್ಥಾನದಲ್ಲಿದ್ದಾರೆ.

‘ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಜಮೆಯಾಗಿದೆ. ದ್ವಿತೀಯ ಪಿಯುಸಿಗೆ ದಾಖಲಾಗುತ್ತಿದ್ದಂತೆಯೇ ಅದರು ಕಾಲೇಜುಗಳಲ್ಲಿ ನೀಡುವ ದತ್ತಾಂಶದ ಆಧಾರದ ಮೇಲೆ ಅವರವರ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಲಾಗಿದೆ. ವಿದ್ಯಾರ್ಥಿಗಳಿಗೆ ತಲಾ ₹ 2,500 ಮತ್ತು ವಿದ್ಯಾರ್ಥಿನಿಯರಿಗೆ ತಲಾ ₹ 3ಸಾವಿರ ನೀಡಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಆರ್.ಚಂದ್ರಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯೋಜನೆಯಲ್ಲಿ ನೋಂದಣಿಗೆ ಕೊನೆಯ ದಿನಾಂಕ ಎನ್ನುವುದಿಲ್ಲ. ಪ್ರಸಕ್ತ ಸಾಲಿನಲ್ಲಿ ಹೊಸದಾಗಿ ಪ್ರವೇಶ ಪಡೆದವರು, ಪ್ರವೇಶಾತಿಗೆ ಸಂಬಂಧಿಸಿದ ದಾಖಲೆಗಳು ದೊರೆತ ನಂತರ ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿಗಳಿಂದ ಪ್ರತಿಕ್ರಿಯೆ ಚೆನ್ನಾಗಿದೆ. ಸರ್ಕಾರದ ಸೌಲಭ್ಯ ಬಳಸಿಕೊಳ್ಳುವಂತೆ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ಆಯಾ ಕಾಲೇಜುಗಳಿಂದಲೂ ಮಾಹಿತಿ ಪಡೆಯಬಹುದಾಗಿದೆ’ ಎನ್ನುತ್ತಾರೆ ಅವರು.

ಯಾರಿಗೆಷ್ಟು ಶಿಷ್ಯವೇತನ?

* ಪಿಯುಸಿ, ಐಟಿಐ, ಡಿಪ್ಲೊಮಾ: ವಿದ್ಯಾರ್ಥಿಗಳಿಗೆ ₹2,500 ಹಾಗೂ ವಿದ್ಯಾರ್ಥಿನಿಯರಿಗೆ (ತೃತೀಯ ಲಿಂಗಿಗಳೂ ಸೇರಿ) ₹3,000

* ಪದವಿ: ವಿದ್ಯಾರ್ಥಿಗಳಿಗೆ ₹5ಸಾವಿರ. ವಿದ್ಯಾರ್ಥಿನಿಯರಿಗೆ ₹5,500.

* ಎಲ್‌ಎಲ್‌ಬಿ, ಪ್ಯಾರಾ ಮೆಡಿಕಲ್‌, ಬಿ.ಫಾರ್ಮ, ನರ್ಸಿಂಗ್‌ ಮೊದಲಾದ ವೃತ್ತಿಪರ ಕೋರ್ಸ್‌: ವಿದ್ಯಾರ್ಥಿಗಳಿಗೆ ₹7,500. ವಿದ್ಯಾರ್ಥಿನಿಯರಿಗೆ ₹8,000.

* ಎಂಬಿಬಿಎಸ್‌, ಬಿಇ, ಬಿ.ಟೆಕ್‌ ಹಾಗೂ ಸ್ನಾತಕೋತ್ತರ ಕೋರ್ಸ್‌: ವಿದ್ಯಾರ್ಥಿಗಳಿಗೆ ₹10ಸಾವಿರ. ವಿದ್ಯಾರ್ಥಿನಿಯರಿಗೆ: ₹11ಸಾವಿರ.

(ಮಾಹಿತಿ: ಕೃಷಿ ಇಲಾಖೆ)

*

ನೆರವು ಕಲ್ಪಿಸಲಾಗುತ್ತದೆ
ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ವಿದ್ಯಾರ್ಥಿಯ ತಂದೆ–ತಾಯಿಗೆ ಜಮೀನು ಇದೆಯೋ, ಇಲ್ಲವೋ ಎನ್ನುವುದನ್ನು ಖಚಿತಪಡಿಸಿಕೊಂಡು ನೆರವು ಕಲ್ಪಿಸಲಾಗುತ್ತದೆ.
–ಡಾ.ಆರ್.ಚಂದ್ರಶೇಖರ್‌, ಜಂಟಿ ನಿರ್ದೇಶಕ. ಕೃಷಿ ಇಲಾಖೆ

*

ಈವರೆಗಿನ ಪ್ರಗತಿ

ತಾಲ್ಲೂಕು;ವಿದ್ಯಾರ್ಥಿಗಳ ಸಂಖ್ಯೆ;ಮೊತ್ತ (₹ಗಳಲ್ಲಿ)

ಎಚ್‌.ಡಿ.ಕೋಟೆ;2,239;66,13,500

ಹುಣಸೂರು;3,399;1,21,28,000

ಕೆ.ಆರ್‌.ನಗರ;3,273;1,19,78,000

ಮೈಸೂರು;27,185;16,78,85,500

ನಂಜನಗೂಡು;4,450;1,56,67,500

ಪಿರಿಯಾಪಟ್ಟಣ;2,490;76,86,000

ತಿ.ನರಸೀಪುರ;3,983;1,34,12,500

ಒಟ್ಟು;47,019;23,53,71,000

(ಮಾಹಿತಿ: ಕೃಷಿ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT