ತಿ.ನರಸೀಪುರ: ‘ಕೇಂದ್ರದ ಬಿಜೆಪಿ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು, ತಮ್ಮ ಎದುರಾಳಿಗಳನ್ನು ಬಗ್ಗು ಬಡಿಯುವ ಹುನ್ನಾರ ನಡೆಸುತ್ತಿದೆ’ ಎಂದು ಮುಖಂಡ ಡಾ.ಎಚ್.ಸಿ. ಮಹದೇವಪ್ಪ ಆರೋಪಿಸಿದರು.
ಪಟ್ಟಣದ ಬಣ್ಣಾರಿ ಮಾರಿಯಮ್ಮ ದೇವಾಲಯದ ಪಕ್ಕದಲ್ಲಿ ಶುಕ್ರವಾರ ತಿ.ನರಸೀಪುರ ಹಾಗೂ ವರುಣಾ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಪಕ್ಷದ ನೂತನ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
‘ಜನರ ಮೇಲೆ ಕಾಳಜಿ ಇಲ್ಲದ ಬಿಜೆಪಿ ಸರ್ಕಾರ ಸುಳ್ಳುಗಳನ್ನು ಹೇಳುತ್ತಿದೆ. ಧರ್ಮ, ಜಾತಿ ಹೆಸರಿನಲ್ಲಿ ಕೋಮುದ್ವೇಷ ಉಂಟುಮಾಡುತ್ತಿದೆ. ಇವರ ಆಡಳಿತದಲ್ಲಿ ಅಲ್ಪಸಂಖ್ಯಾತರು ಆತಂಕದಿಂದ ಬದುಕುವ ವಾತವರಣ ಉಂಟಾಗಿದೆ. ದೇಶದಲ್ಲಿ ಯಾವುದೇ ಜನಪರ ಕಾರ್ಯಗಳು ಆಗುತ್ತಿಲ್ಲ’ ಎಂದು ದೂರಿದರು.
ಬ್ಲಾಕ್ ಅಧ್ಯಕ್ಷ ಎಂ.ಡಿ.ಬಸವರಾಜು, ವರುಣಾ ಶಾಸಕ ಡಾ. ಯತೀಂದ್ರ, ಕೆಪಿಸಿಸಿ ವೀಕ್ಷಕ ಚಿಕ್ಕಮಾದು, ಮುಖಂಡ ಸುನಿಲ್ ಬೋಸ್ ಮಾತನಾಡಿದರು.
ಪುರಸಭಾಧ್ಯಕ್ಷ ಮದನ್ ರಾಜ್, ಬನ್ನೂರು ಬ್ಲಾಕ್ ಅಧ್ಯಕ್ಷ ಚೆನ್ನಕೇಶವ, ಮುಖಂಡರಾದ ರಾಧಾ ಇದ್ದರು.