ಮೈಸೂರು: ಇಲ್ಲಿನ ಹೂಟಗಳ್ಳಿಯ ಕೆಆರ್ಎಸ್ ರಸ್ತೆಯಲ್ಲಿ ಸೋಮವಾರ ರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ಆಟೊವೊಂದು ಗೋಬಿ ಮಂಚೂರಿ ಮಾರಾಟ ಮಾಡುತ್ತಿದ್ದ ಗಾಡಿಗೆ ಡಿಕ್ಕಿ ಹೊಡೆದಿದೆ. ಇದರಿಂದ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹೆಚ್ಚಿನವರಿಗೆ ಕುದಿಯುತ್ತಿದ್ದ ಎಣ್ಣೆ ಮೈಮೇಲೆ ಬಿದ್ದು ಸುಟ್ಟ ಗಾಯಗಳಾಗಿವೆ. ಜತೆಗೆ, 2 ದ್ವಿಚಕ್ರ ವಾಹನ ಸವಾರರಿಗೂ ಗಾಯಗಳಾಗಿವೆ.
ಆಟೊದಲ್ಲಿ ಗಾರ್ಮೆಟ್ಸ್ವೊಂದರ ಕಾರ್ಮಿಕರು ಪ್ರಯಾಣಿಸುತ್ತಿದ್ದರು. ಅತಿ ವೇಗದಲ್ಲಿ ಬಂದ ಚಾಲಕ ರಸ್ತೆ ಬದಿಯ ಗಾಡಿಗೆ ಡಿಕ್ಕಿ ಹೊಡೆದಿದ್ದಾನೆ. ನಂತರ, 2 ದ್ವಿಚಕ್ರ ವಾಹನಗಳಿಗೂ ಡಿಕ್ಕಿಯಾಗಿದೆ.
ಅಪಘಾತದಲ್ಲಿ ಬಾಲಕಿ ಶ್ವೇತಾ ಎಂಬುವವರಿಗೆ ತೀವ್ರತರವಾದ ಗಾಯವಾಗಿವೆ. ಗಾಯಾಳುಗಳನ್ನು ಕೆ.ಆರ್.ಆಸ್ಪತ್ರೆ ಹಾಗೂ ಹೂಟಗಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿ.ವಿ.ಪುರಂ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹೇಶ್, ಅಶೋಕ, ಲೋಕೇಶ್, ಶ್ವೇತಾ, ಕಾಂತರಾಜು, ರಂಜಿತಾ, ಜ್ಯೋತಿ, ರಜನಿ, ಕಮಲಾ, ಹಸೀನಾ ಬಾನು, ಹಜಿರಾ ಬೇಗಂ, ಪವಿತ್ರಾ, ಮೀನಾ, ರೋಜಾ, ನಂದಾ ಹಾಗೂ ಇತರರು ಗಾಯಗೊಂಡವರು.