ಮೈಸೂರು: ಸ್ವಾಮಿ ವಿವೇಕಾನಂದ ಯೂತ್ಮೂವ್ಮೆಂಟ್ನ ವತಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಭಾನುವಾರ ನಡೆದ ‘ಸ್ವರಾನುಭೂತಿ’ ಕಾರ್ಯಕ್ರಮದಲ್ಲಿ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಕಂಠಸಿರಿಗೆ ಪ್ರೇಕ್ಷಕ ವೃಂದ ತಲೆದೂಗಿತು.
ಇವರಿಗೆ ಗಾಯಕಿ ದಿವ್ಯಾ ರಾಘವನ್ ಹಲವು ಹಾಡುಗಳಿಗೆ ಸಾಥ್ ನೀಡಿದರು. ಹಳೆಯ ಹಾಡುಗಳ ರಸದೌತಣ ಸವಿದ ಸಭಿಕರು ಇಳಿಸಂಜೆಯಲ್ಲಿ ವಿಶೇಷಾನುಭೂತಿ ಪಡೆದರು.
‘ಕನ್ನಡ ನಾಡಿನ ಜೀವ ನದಿ ಕಾವೇರಿ’ ಹಾಡಿಗೆ ಪ್ರೇಕ್ಷಕ ವೃಂದ ತನ್ಮಯಗೊಂಡಿತು. ‘ನನ್ನ ಹಾಡು ನನ್ನದು ನನ್ನ ರಾಗ ನನ್ನದು’ ಹಾಡಿಗೆ ಪ್ರೇಕ್ಷಕರೂ ದನಿಗೂಡಿಸಿದರು. ‘ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟಿ ಕಣೊ’ ಹಾಡನ್ನು ಪ್ರೇಕ್ಷಕರು ಮೌನವಾಗಿ ಆಲಿಸಿದರು. ಪ್ರತಿ ಹಾಡಿನ ನಂತರ ಭರಪೂರ ಕರತಾಡನಗಳು ಮೊಳಗಿದವು.