ಮೈಸೂರು: ಉಡ ಮಾರಾಟ ಮಾಡಲು ಯತ್ನಿಸಿದ ಮಂಡ್ಯದ ಶ್ರೀರಂಗಪಟ್ಟಣ ತಾಲ್ಲೂಕಿನ ಬೋವಿ ಕಾಲೊನಿ ನಿವಾಸಿ ರಾಮಾಚಾರಿ ಎಂಬಾತನನ್ನು ಅರಣ್ಯ ಸಂಚಾರ ದಳದ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.
ಖರೀದಿದಾರರಂತೆ ಸೋಗು ಹಾಕಿದ ಅಧಿಕಾರಿಗಳು ಈತನ ಬಳಿ ಇದ್ದ 1.25 ಅಡಿ ಉದ್ದದ ಉಡವನ್ನು ರಕ್ಷಿಸಿದ್ದಾರೆ.
ತಾನು ಹಂದಿ ಸಾಕಾಣೆ ಮಾಡುತ್ತಿದ್ದ ಜಾಗದಲ್ಲಿ ಹಂದಿಗೆ ಹಾಕಲಾಗುತ್ತಿದ್ದ ಆಹಾರವನ್ನು ತಿನ್ನಲು ಈ ಉಡ ಬಂದಿತ್ತು. ಇದನ್ನು ಉರುಳು ಹಾಕಿ ಹಿಡಿದೆ ಎಂದು ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಡಿಸಿಎಫ್ ಪೂವಯ್ಯ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಆರ್ಎಫ್ಒ ವಿವೇಕ್, ಸಿಬ್ಬಂದಿಯಾದ ಮೋಹನ್, ಲಕ್ಷ್ಮೀಶ್, ಪ್ರಮೋದ್, ಸುಂದರ್ ತಂಡದಲ್ಲಿದ್ದರು.