ಮೈಸೂರು: ತನ್ನ ಸೋದರಿಯ ಮಾಂಗಲ್ಯ ಸರವನ್ನೇ ಕಳವು ಮಾಡಿದ್ದ ಆರೋಪಿ ಹೂಟಗಳ್ಳಿ ನಿವಾಸಿ ಸಂತೋಷ್ಕುಮಾರ್ (33) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಂದ 70 ಗ್ರಾಂ ತೂಕದ ₹ 3.50 ಲಕ್ಷ ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.
ಅಣ್ಣ, ತಂಗಿ ಇಬ್ಬರು ಚಾಮರಾಜೇಂದ್ರ ಮೃಗಾಲಯದ ಸಮೀಪ ಇರುವ ಬಟ್ಟೆ ಅಂಗಡಿಗೆ ಬಂದು ವಾಪಸ್ ಮನೆಗೆ ಹೋದಾಗ ವ್ಯಾನಿಟಿ ಬ್ಯಾಗ್ನಲ್ಲಿಟ್ಟಿದ್ದ ಚಿನ್ನದ ಸರ ಕಳವಾಗಿರುವುದು ಗೊತ್ತಾಗಿದೆ. ಮಹಿಳೆಯು ಪೊಲೀಸರಿಗೆ ದೂರು ನೀಡಿದರು. ವಿಚಾರಣೆ ಮಾಡಿದಾಗ ಮಹಿಳೆಯು ಕೆಲಕಾಲ ತನ್ನ ವ್ಯಾನಿಟಿ ಬ್ಯಾಗ್ನ್ನು ಅಣ್ಣನಿಗೆ ನೀಡಿರುವ ವಿಚಾರ ತಿಳಿಯಿತು. ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕಳವು ಮಾಡಿರುವುದಾಗಿ ಆತನ ಒಪ್ಪಿಕೊಂಡ ಎಂದು ಪೊಲೀಸರು ತಿಳಿಸಿದ್ದಾರೆ.
ನಜರ್ಬಾದ್ ಠಾಣೆಯ ಇನ್ಸ್ಪೆಕ್ಟರ್ ಜಿ.ಎನ್.ಶ್ರೀಕಾಂತ್, ಸಬ್ಇನ್ಸ್ಪೆಕ್ಟರ್ ಎಂ.ಎಲ್.ಸಿದ್ದೇಶ್, ಎಎಸ್ಐ ಕೃಷ್ಣ ಹಾಗೂ ಸಿಬ್ಬಂದಿಯಾದ ಎಚ್.ವಿ.ಮಧುಕೇಶ್, ಬಿ.ವಿ.ಪ್ರಕಾಶ್, ಪಿ.ಚೇತನ್, ಸಂದೇಶ್ ಕುಮಾರ್, ಕಿರಣ್ ರಾಥೋಡ್, ಚೇತನ್, ಸೌಮ್ಯ ಕಾರ್ಯಾಚರಣೆ ತಂಡದಲ್ಲಿದ್ದರು.
ಮಾನವೀಯತೆ ಮೆರೆದ ಜಿಲ್ಲಾ ಪೊಲೀಸರು
ಮೈಸೂರು: ಎಚ್.ಡಿ.ಕೋಟೆ ತಾಲ್ಲೂಕಿನ ಕೆ.ಎಡತೊರೆ ಗ್ರಾಮದ ಬಳಿ ಬುಧವಾರ ಎರಡು ಬೈಕ್ಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಗಾಯಾಳು ಒಬ್ಬರನ್ನು ಆಸ್ಪತ್ರೆಗೆ ತಮ್ಮ ವಾಹನದಲ್ಲೇ ದಾಖಲಿಸುವ ಮೂಲಕ ಪಟ್ಟಣದ ಪೊಲೀಸರು ಮಾನವೀಯತೆ ಮರೆದಿದ್ದಾರೆ.
ಘಟನೆಯಲ್ಲಿ ಕೆ.ಎಡತೊರೆ ಗ್ರಾಮದ ಹಮೀದ್ (49) ಸ್ಥಳದಲ್ಲೇ ಮೃತಪಟ್ಟಿದ್ದು, ಪಿರಿಯಾಪಟ್ಟಣ ತಾಲ್ಲೂಕಿನ ಕಗ್ಗುಂಡಿ ಗ್ರಾಮದ ಪ್ರತಾಪ್ (30) ಎಂಬುವವರು ಗಾಯಗೊಂಡಿದ್ದಾರೆ.
ಅಪಘಾತ ನಡೆದು ಸ್ಥಳದಲ್ಲೆ ಹಮೀದ್ ಮೃತಪಟ್ಟರು. ಆದರೆ, ಮತ್ತೊಂದು ಬೈಕ್ನ ಸವಾರ ಪ್ರತಾಪ್ ಗಾಯಗೊಂಡು ಒದ್ದಾಡುತ್ತಿದ್ದಾಗ ಸ್ಥಳಕ್ಕೆ ಬಂದ ಗಸ್ತುವಾಹನದ ಪೊಲೀಸರು, ಆಂಬುಲೆನ್ಸ್ಗಾಗಿ ಕಾಯದೇ ತಕ್ಷಣವೇ ತಮ್ಮ ವಾಹನದಲ್ಲೇ ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಪಟ್ಟಣ ಠಾಣೆಯ ಪಿಎಸ್ಐ ಅಶ್ವಿನಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.