ಮೈಸೂರು: ಪ್ರಸಕ್ತ ಸಾಲಿನಲ್ಲಿ 3.40 ಲಕ್ಷ ಮನೆಗಳ ನಿರ್ಮಾಣ ಕಾರ್ಯ 8-10 ತಿಂಗಳಿನಲ್ಲಿ ಪೂರ್ಣವಾಗಲಿದೆ. ಇದರಲ್ಲಿ ಕೆ.ಆರ್.ಕ್ಷೇತ್ರದಲ್ಲಿ 2,212 ಮನೆಗಳು ನಿರ್ಮಾಣವಾಗಲಿವೆ ಎಂದು ವಸತಿ ಇಲಾಖೆ ಸಚಿವ ವಿ.ಸೋಮಣ್ಣ ತಿಳಿಸಿದರು.
ಇಲ್ಲಿನ ವಿದ್ಯಾರಣ್ಯಾಪುರಂ ಉದ್ಯಾನದಲ್ಲಿ ಶಾಸಕ ಎಸ್.ಎ.ರಾಮದಾಸ್ ಆಯೋಜಿಸಿದ್ದ 'ಮೋದಿ ಯುಗ್ ಉತ್ಸವ್' ಕಾರ್ಯಕ್ರಮದಲ್ಲಿ ಮಂಗಳವಾರ ಆಶ್ರಯ ಮನೆಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಲಕ್ಷಾಂತರ ಮನೆಗಳು ಮಂಜೂರು ಮಾಡಿದ್ದರೂ ಮನೆ ನಿರ್ಮಾಣ ಕಾಮಗಾರಿ ಆರಂಭಿಸಿರಲಿಲ್ಲ. ನನ್ನ ಅವಧಿಯಲ್ಲಿ ಹಿಂದಿನ ಅವಧಿಯ 1.80 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ ಎಂದು ಹೇಳಿದರು.
ಇಷ್ಟು ಮನೆಗಳು 2015-16, 2017-18 ನೇ ಸಾಲಿನಲ್ಲೆ ಮಂಜೂರಾಗಿತ್ತು. ಬುಡಕಟ್ಟು ಜನಾಂಗದವರಿಗೆ 65 ಸಾವಿರ ಮನೆಗಳು ಮಂಜೂರಾಗಿದ್ದವು. ಹಿಂದಿನ ಸರ್ಕಾರಗಳು ನಿರ್ಲಕ್ಷ್ಯ ವಹಿಸಿದ್ದವು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆದ ಮೇಲೆ ಮನೆ ನಿರ್ಮಾಣ ಕಾಮಗಾರಿ ಆರಂಭವಾಗಿವೆ ಎಂದು ಹೇಳಿದರು.
ಫಲಾನುಭವಿಗಳು ಮನೆಗಳನ್ನು ಬಾಡಿಗೆಗೆ ಕೊಡದೆ ಮಾರಾಟ ಮಾಡದೇ ಅದರಲ್ಲಿಯೇ ವಾಸಿಸಬೇಕು ಎಂದು ಹೇಳಿದರು.
ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಶಾಸಕನಾದ ಮೇಲೆ ವಿವಿಧ ವಸತಿ ಯೋಜನೆಗಳಡಿ 3816 ಮನೆಗಳನ್ನು ಬಡವರಿಗೆ ನೀಡಿದ್ದೇನೆ. ಸಮೀಕ್ಷೆ ನಡೆಸಿದ 81 ಸಾವಿರ ಮಂದಿಯಲ್ಲಿ 11 ಸಾವಿರ ಮಂದಿ ಬಾಡಿಗೆ ಮನೆಯಲ್ಲಿರುವವರು ಅರ್ಜಿ ಸಲ್ಲಿಸಿದ್ದರು. ಈಗ ಗೊರೂರಿನಲ್ಲಿ 22.5 ಎಕರೆ ಪ್ರದೇಶದಲ್ಲಿ 2,212 ಮನೆಗಳಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಆದಷ್ಟು ಬೇಗ ಈ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಿಕೊಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
2,122 ಮನೆಗಳ ನಿರ್ಮಾಣಕ್ಕೆ ಭೂಮಿಪೂಜೆ ಮೈಸೂರು: ತಾಲ್ಲೂಕಿನ ಗೊರೂರಿನಲ್ಲಿ ಗುಂಪು ಮನೆಗಳ ಯೋಜನೆಗೆ ವಸತಿ ಸಚಿವ ವಿ.ಸೋಮಣ್ಣ ಮಂಗಳವಾರ ಭೂಮಿಪೂಜೆ ನೆರವೇರಿಸಿದರು. ಮನೆ ಸರಿಯಾಗಿ ನಿರ್ಮಾಣ ಆಗದಿದ್ದರೆ ಎಫ್ಐಆರ್ ದಾಖಲಿಸಲಾಗುವುದು ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು. ಒಟ್ಟು ಇಲ್ಲಿ 2,122 ಮನೆಗಳನ್ನು ಇಲ್ಲಿ ನಿರ್ಮಿಸಲಾಗುತ್ತದೆ.