ನಂಜನಗೂಡು: ತಾಲ್ಲೂಕಿನ ಹದಿನಾರು ಕೆರೆ ಬಳಿ ಭಾನುವಾರ ಸಂಜೆ ಪಕ್ಷಿ ಬೇಟೆಯಲ್ಲಿ ನಿರತರಾಗಿದ್ದ ಯುವಕರನ್ನು ಗ್ರಾಮಸ್ಥರು ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಮೈಸೂರಿನ ಆಲನಹಳ್ಳಿ ಬಡಾವಣೆ ನಿವಾಸಿಗಳಾದ ಭರತ್ ಕುಮಾರ್ (24), ಮೋಹನಕುಮಾರ್ (27) ಹಾಗೂ ಮನೋಜ್ (21) ಬಂಧಿತರು. ಪ್ರದೀಪ್ ಎಂಬಾತ ತಲೆಮರೆಸಿಕೊಂಡಿದ್ದು, ಬಂಧಿತರಿಂದ ಪಕ್ಷಿ ಬೇಟೆಗೆ ಬಳಸುತ್ತಿದ್ದ ಏರ್ ಗನ್ಗಳು ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಭಾನುವಾರ ಸಂಜೆ ಹದಿನಾರು ಕೆರೆ ಸಮೀಪ ಪಕ್ಷಿಗಳನ್ನು ಬೇಟೆಯಾಡಲು ಕಾರಿನಲ್ಲಿ ಬಂದಿದ್ದ ನಾಲ್ವರಲ್ಲಿ ಒಬ್ಬ ತಪ್ಪಿಸಿಕೊಂಡಿದ್ದು, ಮೂವರನ್ನು ಗ್ರಾಮಸ್ಥರು ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಮೂವರ ಮೇಲೆ ವಲಯ ಅರಣ್ಯಾಧಿಕಾರಿ ರಕ್ಷಿತ್ ಅವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.