ಮೈಸೂರು: ‘ಪ್ರಧಾನಿ ಮೋದಿ ಅವರಿಗೆ ಸ್ವಾತಂತ್ರ್ಯದ ನೆನಪು ಮರುಕಳಿಸಲಿ, ಜನಸಾಮಾನ್ಯರ ಸ್ವಾತಂತ್ರ್ಯಕ್ಕಾಗಿ ಸ್ವಾತಂತ್ರ್ಯ ದಿನವನ್ನು ಜಾರಿಗೆ ಬರಲಿ’ ಎಂಬ ಘೋಷಣೆಯೊಂದಿಗೆ ಕರಪತ್ರ ಚಳವಳಿ ಹಮ್ಮಿಕೊಂಡಿದ್ದ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರನ್ನು ಪೊಲೀಸರು ಭಾನುವಾರ ಬಂಧಿಸಿ, ಬಳಿಕ ಬಿಡುಗಡೆ ಮಾಡಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ದಸಂಸ ಕಾರ್ಯಕರ್ತರು ಚಳವಳಿ ಹಮ್ಮಿಕೊಂಡಿದ್ದರು. ಈ ವೇಳೆ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಸಂಸದರು ಕಾರ್ಪೊರೇಟ್ ಸಂಸ್ಥೆೆಗಳಿಗೆ ಮಾರಾಟವಾಗಿದ್ದು, ಅವರಿಂದ ಸಂವಿಧಾನದ ಪಾವಿತ್ರ್ಯತೆ ಉಳಿಯುವುದಿಲ್ಲ. ಇವರಿಂದ ಜನಸಾಮಾನ್ಯರ ಸ್ವಾತಂತ್ರ್ಯವೂ ಉಳಿಯಲು ಸಾಧ್ಯವಿಲ್ಲ. ಜನರ ಬದುಕಿಗೆ ಇಲ್ಲದ ಸ್ವಾತಂತ್ರ್ಯ ಸ್ವಾತಂತ್ರ್ಯವೇ ಅಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ, ಜಿಲ್ಲಾಡಳಿತದ ವತಿಯಿಂದ ಬನ್ನಿಮಂಟಪದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕರಪತ್ರಗಳನ್ನು ಹಂಚಲು ತೆರಳಲು ಮುಂದಾದರು. ಈ ವೇಳೆ, 25ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು, ಸಿಎಆರ್ ಮೈದಾನಕ್ಕೆೆ ಕರೆದೊಯ್ದರು. ಬಳಿಕ ಅವರನ್ನು ಬಿಡುಗಡೆಗೊಳಿಸಿದರು.
ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಶಂಭುಲಿಂಗಸ್ವಾಮಿ, ಮುಖಂಡರಾದ ಎಸ್. ರಾಜಣ್ಣ, ಅಪ್ಸರ್ ಅಹಮ್ಮದ್ ಇತರರು ಇದ್ದರು.