ಮೈಸೂರು: ರಾಜ್ಯ ಸರ್ಕಾರವು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರ ಬೆನ್ನುಲುಬು ಮುರಿಯುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಆರ್.ಧ್ರುವನಾರಾಯಣ ಟೀಕಿಸಿದರು.
ಹೋರಾಟದ ಮೂಲಕ ಬಂದ ಬಿ.ಎಸ್.ಯಡಿಯೂರಪ್ಪ ಅವರಿಂದ ರೈತರ ಹಿತಾಸಕ್ತಿ ಬದಿಗಿರಿಸಿ ಕಾರ್ಪೋರೇಟ್ ವಲಯಕ್ಕೆ ಅನುಕೂಲ ಮಾಡಿಕೊಡುವಂತಹ ತಿದ್ದುಪಡಿಯನ್ನು ನಿರೀಕ್ಷಿರಲಿಲ್ಲ ಎಂದು ಅವರು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ವಿರೋಧ ಪಕ್ಷಗಳನ್ನು ಎದುರಿಸಲಾಗದ ಸರ್ಕಾರವು ಸುಗ್ರೀವಾಜ್ಞೆ ಮೂಲಕವೇ ತಿದ್ದುಪಡಿ ತಂದು ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿದೆ. ಈ ಕುರಿತು ಕೂಡಲೇ ತುರ್ತು ಅಧಿವೇಶನ ಕರೆದು ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದರು.
ಜನಸಂಖ್ಯೆ ಕಡಿಮೆ ಇರುವ ವಿದೇಶಗಳಲ್ಲಿಯಂತೆ ವಿಸ್ತಾರವಾದ ಭೂಮಿಯಲ್ಲಿ ಒಬ್ಬ ವ್ಯಕ್ತಿ ಕೃಷಿ ಮಾಡಲು ನಮ್ಮಲ್ಲಿ ಸಾಧ್ಯವಿಲ್ಲ. ರೈತರಿಂದ ಕೃಷಿ ಭೂಮಿಯನ್ನು ಕಿತ್ತುಕೊಂಡರೆ ಆಹಾರದ ಉತ್ಪಾದನೆಯಲ್ಲಿ ಇಳಿಮುಖವಾಗುತ್ತದೆ. ಸರ್ಕಾರ ಕೂಡಲೇ ತನ್ನ ಪ್ರಯತ್ನದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಬದಲಾಗಿ ಕೃಷಿ ವಲಯದಲ್ಲಿ ಸಹಕಾರ ಸಂಘಗಳನ್ನು ಸ್ಥಾಪಿಸಬೇಕು, ಸಾವಯವ ಕೃಷಿಗೆ ಒತ್ತು ನೀಡಬೇಕು, ಯಡಿಯೂರಪ್ಪ ಅವರು ತಮ್ಮ ಹಿಂದಿನ ರೈತಪರ ಹೋರಾಟಗಳನ್ನು ಮರೆಯಬಾರದು ಎಂದು ಸಲಹೆ ನೀಡಿದರು.
ಕೇಂದ್ರ ಸರ್ಕಾರ ರಾಜ್ಯವನ್ನು ನಿರ್ಲಕ್ಷಿಸುತ್ತಿದ್ದರೂ ಒಬ್ಬ ಸಂಸದವರೂ ದನಿ ಎತ್ತುತ್ತಿಲ್ಲ. ಒಂದೆ ಒಂದು ನಿಯೋಗ ಕೇಂದ್ರವನ್ನು ಭೇಟಿ ಮಾಡಿಲ್ಲ ಎಂದು ಕಿಡಿಕಾರಿದರು.
ದಿನೇ ದಿನೇ ಹೆಚ್ಚುತ್ತಿರುವ ಇಂಧನ ಬೆಲೆ ವಿರೋಧಿಸಿ ಸದ್ಯದಲ್ಲೇ ಹೋರಾಟ ರೂಪಿಸಲಾಗುವುದು ಎಂದು ಅವರು ತಿಳಿಸಿದರು.
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಪಕ್ಷದ ಮುಖಂಡರಾದ ಎಚ್.ಎ.ವೆಂಕಟೇಶ್, ರಘು ಇದ್ದರು.