ಮೈಸೂರು: ಇಲ್ಲಿನ ಲಲಿತಮಹಲ್ ಸಮೀಪ ಹೆಲಿಪ್ಯಾಡ್ಗಾಗಿ ಮರಗಳನ್ನು ಕತ್ತರಿಸಬಾರದು ಎಂದು ಆಗ್ರಹಿಸಿ ಪರಿಸರ ಬಳಗದ ನೇತೃತ್ವದಲ್ಲಿ ಹಲವು ಮಂದಿ ಭಾನುವಾರ ಪ್ರದರ್ಶನ ನಡೆಸಿದರು.
ರಂಗಕರ್ಮಿ ಜನಾರ್ದನ್, ಗಾಯಕ ದೇವಾನಂದ ವರಪ್ರಸಾದ್, ನಾರಾಯಣಸ್ವಾಮಿ ಹಾಗೂ ತಂಡದವರು ಪರಿಸರಗೀತೆಗಳನ್ನು ಹಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.
ಕೆ.ಸಿ.ಬಡಾವಣೆ, ನೇತಾಜಿ ನಗರ ಸೇರಿದಂತೆ ಸುತ್ತಮುತ್ತಲ ನಿವಾಸಿಗಳು ಇಲ್ಲಿ ಸೇರಿ, ‘ಮರಗಳನ್ನು ಕತ್ತರಿಸುವುದು ಬೇಡ, ಬೇರೆ ಕಡೆ ಹೆಲಿಪ್ಯಾಡ್ ನಿರ್ಮಿಸಿ’ ಎಂಬ ಘೋಷಣೆಗೆ ಬೆಂಬಲ ವ್ಯಕ್ತಪಡಿಸಿದರು.
ಕೋವಿಡ್ ಪ್ರಕರಣ ಹೆಚ್ಚಾಗುತ್ತಿ ರುವುದರಿಂದ ಅರಣ್ಯ ಇಲಾಖೆಯು ಮರಗಳನ್ನು ಕತ್ತರಿಸುವ ಸಂಬಂಧ ಕರೆದಿರುವ ಏಪ್ರಿಲ್ 23ರ ಸಾರ್ವಜನಿಕರ ಅಹವಾಲು ಸಭೆಯನ್ನು ಮುಂದೂಡ ಬೇಕು ಎಂದು ಕೆಲವು ಕಾರ್ಯಕರ್ತರು ಒತ್ತಾಯಿಸಿದರು. ಈಗಾಗಲೇ, ಆನ್ಲೈನ್ ಸಹಿ ಸಂಗ್ರಹ ಅಭಿಯಾನಕ್ಕೆ 70 ಸಾವಿರ ಮಂದಿ ಸಹಿ ಮಾಡಿದ್ದಾರೆ. ಅಂದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬರಲಿದ್ದಾರೆ. ಹಾಗಾಗಿ, ಸಭೆಯನ್ನು ಮುಂದೂಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಪರಿಸರವಾದಿಗಳಾದ ಪರಶು ರಾಮೇಗೌಡ, ಪ್ರೊ.ಕಾಳಚನ್ನೇಗೌಡ, ಎಂ.ಪಿ.ವರ್ಷ, ಕುಸುಮಾ ಆಯರಹಳ್ಳಿ, ತನುಜಾ, ಹೊಸಹಳ್ಳಿ ಶಿವು, ಪ್ರದೀಪ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.