ಹುಣಸೂರು: ‘ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾದವರಿಗೆ,ನಾಲ್ಕು ತಿಂಗಳಾದರೂ ಪರಿಹಾರ ನೀಡದ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ಸತ್ತಂತಿದೆ’ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುರುವಾರ ಇಲ್ಲಿ ಕಿಡಿಕಾರಿದರು.
‘ಆಗಸ್ಟ್ನಲ್ಲಿ ನಡೆದ ಕಲಾಪದಲ್ಲಿ, ಸರ್ಕಾರ ಜನರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿತ್ತಾದರೂ ಇದುವರೆಗೂ ಪರಿಹಾರ ನೀಡಿಲ್ಲ. ಈ ರೀತಿ ವರ್ತಿಸುವ ಸರ್ಕಾರ, ಜೀವಂತವಾಗಿ ಉಳಿದಿದೆ ಎನ್ನಲು ಸಾಧ್ಯವೆ?’ ಎಂದು ಕುಟುಕಿದರು.
‘ಪ್ರಾಕೃತಿಕ ವಿಕೋಪದಲ್ಲಿ ನೊಂದವರಿಗೆ ಸ್ಪಂದಿಸುವ ವಿಷಯದಲ್ಲಿ ಸರ್ಕಾರ ನಿದ್ರೆಗೆ ಜಾರಿದೆ. ಈ ಹಂತದಲ್ಲಿ, ಜನರ ನೋವನ್ನು ಮುಖ್ಯಮಂತ್ರಿಗಳಿಗೆ ತಲುಪಿಸುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.
‘ಆಗಸ್ಟ್ ತಿಂಗಳಲ್ಲಿ ನಡೆದ ಕಲಾಪದಲ್ಲಿ ಸರ್ಕಾರ ಜನರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿತ್ತಾದರೂ ನಾಲ್ಕು ತಿಂಗಳಾಗಿದ್ದರೂ ಪರಿಹಾರ ನೀಡಿಲ್ಲ. ಈ ರೀತಿ ವರ್ತಿಸುವ ಸರ್ಕಾರ ಜೀವಂತವಾಗಿ ಉಳಿದಿದೆ ಎನ್ನಲು ಸಾಧ್ಯವೆ?’ ಎಂದು ಕುಟುಕಿದರು.
ತಂಬಾಕು: ರಾಜ್ಯದಲ್ಲಿ ಕೋವಿಡ್ ಆತಂಕದಲ್ಲೂ ರೈತರು ತಂಬಾಕು ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ದರ ಇಲ್ಲ ಎಂದು ಕಾಂಗ್ರೆಸ್ ಶಾಸಕರು ಗಮನಕ್ಕೆ ತಂದಿದ್ದಾರೆ. ಮುಖ್ಯಮಂತ್ರಿಗಳು ದರ ನಿಗದಿಗೆ ಸಂಬಂಧಿಸಿದಂತೆ ಕಂಪನಿ ಹಾಗೂ ಮಾರುಕಟ್ಟೆ ಅಧಿಕಾರಿಗಳ ಸಭೆ ನಡೆಸಬೇಕು ಎಂದರು.
‘ತಂಬಾಕು ವಹಿವಾಟು ಕೇಂದ್ರ ಸರ್ಕಾರದ ಹಿಡಿತದಲ್ಲಿದ್ದು ಸಂಸದರು ಈ ಸಂಬಂಧ ವಾಣಿಜ್ಯ ಸಚಿವರೊಂದಿಗೆ ಚರ್ಚಿಸಿ ದರ ಕೊಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಬೇಕಾಗಿದೆ. ನೆರೆಯ ಆಂಧ್ರಪ್ರದೇಶದಲ್ಲಿ ಸರ್ಕಾರ ವಿಶೇಷ ಅನುದಾನದಲ್ಲಿ ರೈತನಿಂದ ತಂಬಾಕು ಖರೀದಿಸಿ ಸರಾಸರಿ ದರ ಸ್ಥಿರತೆ ಕಾದುಕೊಳ್ಳುವ ಪ್ರಯತ್ನದಲ್ಲಿ ಯಶಸ್ವಿಯಾಗಿದೆ. ಈ ಸಂಬಂಧ ಈಗಾಗಲೇ ಎರಡು ಪತ್ರ ಬರೆದು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ರಾಜ್ಯದಲ್ಲೂ ತಂಬಾಕು ಬೆಳೆಗಾರರ ನೋವಿಗೆ ಸ್ಪಂದಿಸುವಂತೆ ಮನವಿ ಮಾಡುತ್ತೇನೆ’ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ತಿಳಿಸಿದರು.
‘ನಗರಸಭೆಗೆ ಎರಡು ವರ್ಷದಿಂದ ಆಯುಕ್ತರಿಲ್ಲದೆ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿರುವ ಬಗ್ಗೆ ಶಾಸಕರು ಗಮನಕ್ಕೆ ತಂದಿದ್ದಾರೆ. ಹಾಲಿ ಸರ್ಕಾರ ಯಾವ ರೀತಿ ಆಡಳಿತ ನಡೆಸಿದೆ ಎನ್ನಲು ಇದೇ ಸಾಕ್ಷಿ’ ಎಂದರು.
‘ಉಪಚುನಾವಣೆಗಳು ಆಡಳಿತದ ಸರ್ಕಾರಕ್ಕೆ ಫಲಿತಾಂಶ ಸಿಗುವುದು ಸಾಮಾನ್ಯ. ಈ ಚುನಾವಣೆಯಲ್ಲಿ ಶಿರಾ ಮತ್ತು ಆರ್.ಆರ್. ಕ್ಷೇತ್ರದಲ್ಲಿ ಬಿಜೆಪಿ ಹಣದ ಹೊಳೆ ಹಾಗೂ ಅಧಿಕಾರ ದುರುಪಯೋಗ ಮಾಡಿಕೊಂಡು ಕ್ಷೇತ್ರ ಗೆದ್ದಿದೆ’ ಎಂದು ಆರೋಪಿಸಿದರು.
ಶಾಸಕ ಮಂಜುನಾಥ್, ಮಾಜಿ ಶಾಸಕ ವೆಂಕಟೇಶ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಜಿ.ಪಂ. ಉಪಾಧ್ಯಕ್ಷ ಗೌರಮ್ಮ ಸೋಮಶೇಖರ್, ನಗರಸಭೆ ಅಧ್ಯಕ್ಷ ಅನುಷಾ ರಾಘು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.