ಎಚ್.ಡಿ.ಕೋಟೆ: ಪಟ್ಟಣದ 12ನೇ ವಾರ್ಡ್ನಲ್ಲಿ ಮೂಲಸೌಕರ್ಯಗಳು ಮರೀಚಿಕೆಯಾಗಿವೆ. ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ರಸ್ತೆ, ಚರಂಡಿ, ಸಮರ್ಪಕ ಕುಡಿಯುವ ನೀರಿನ ಸೌಲಭ್ಯವಿಲ್ಲ. ಕೊಳಚೆ ನೀರು ರಸ್ತೆ ಮಧ್ಯದಲ್ಲೇ ಹರಿಯುತ್ತಿದ್ದು, ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ರಸ್ತೆಗಳಲ್ಲಿ ಕೊಳಚೆ ನೀರು ನಿಂತಿದ್ದು, ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ದುರ್ವಾಸನೆ ಬೀರುತ್ತಿದ್ದು ಸ್ಥಳೀಯರು ವಾಸ ಮಾಡಲು ಸಾಧ್ಯ ವಾಗದ ಸ್ಥಿತಿ ನಿರ್ಮಾಣವಾಗಿದೆ.
ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ದಟ್ಟವಾಗಿ ಬೆಳೆದು ನಿಂತಿವೆ. ಅವುಗಳನ್ನು ಸ್ವಚ್ಛಗೊಳಿಸಲು ನಿವೇಶನಗಳ ಮಾಲೀಕರು ಮುಂದಾಗಿಲ್ಲ. ಪುರಸಭೆ ಅಧಿಕಾರಿಗಳೂ ಸಹ ಈ ಬಗ್ಗೆ ಗಮನ ಹರಿಸಿಲ್ಲ.
ನಿರ್ಮಾಣ ಕಾಮಗಾರಿ
ವಾರ್ಡ್ನಲ್ಲಿ ಮನೆಗಳ ನಿರ್ಮಾಣ ಕಾರ್ಯ ಜೋರಾಗಿದೆ. ಮನೆಗಳ ನಿರ್ಮಾಣಕ್ಕಾಗಿ ಎಲ್ಲೆಂದರಲ್ಲಿ ಇಟ್ಟಿಗೆ, ಮರಳು, ಜಲ್ಲಿ ಮತ್ತಿತರ ವಸ್ತುಗಳನ್ನು ಹಾಕಲಾಗಿದೆ. ಇದರಿಂದ ಕಾಲುದಾರಿಗಳೂ ಸಹ ಮುಚ್ಚಿಹೋಗಿವೆ. ಹಳ್ಳಕೊಳ್ಳಗಳಲ್ಲೇ ನಡೆದಾಡುವ ಸ್ಥಿತಿ ಇದೆ.
ಖಾಲಿ ನಿವೇಶನಗಳ ನಿರ್ವಹಣೆ ಇಲ್ಲದೆ ಸೊಳ್ಳೆ, ಹಾವು, ಚೇಳುಗಳ ಆವಾಸ ಸ್ಥಾನ ಮಾರ್ಪಟ್ಟಿವೆ. ಮನೆಯಲ್ಲಿ ನೆಮ್ಮದಿಯಾಗಿ ವಾಸ ಮಾಡಲು ಆಗುತ್ತಿಲ್ಲ ಎಂದು ಸ್ಥಳೀಯ ನಿವಾಸಿ ರಂಗಸ್ವಾಮಿ ಅಳಲು ತೋಡಿಕೊಂಡರು.
ಅಲ್ಲಲ್ಲಿ ಗುಂಡಿಗಳು ಬಿದ್ದಿದ್ದು, ದ್ವಿಚಕ್ರ ವಾಹನಗಳು ಮತ್ತು ಕಾರು ಗಳಲ್ಲಿ ಮನೆಗೆತಲುಪಲು ತೀವ್ರ ಕಷ್ಟವಾಗಿದೆ. ಮಕ್ಕಳನ್ನು ಮನೆಯ ಹೊರಗೆ ಕಳುಹಿಸಿಕೊಡಲು ಭಯ ವಾಗುತ್ತದೆ ಎಂದು ಕೆ.ಎಂ.ಮಹೇಶ್ ಹೇಳಿದರು.
ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಈ ವಾರ್ಡ್ ಸಮಸ್ಯೆ ಗಳನ್ನು ಪರಿಹರಿಸಬೇಕು ಎಂದು ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.
‘ಕ್ರಮ ಕೈಗೊಳ್ಳದ ಅಧಿಕಾರಿಗಳು’
‘ಬಡಾವಣೆಯಲ್ಲಿ ಓಡಾಡಲಿಕ್ಕೆ ಸರಿಯಾದ ರಸ್ತೆಗಳಿಲ್ಲ. ಎಲ್ಲೆಂದರಲ್ಲಿ ಚರಂಡಿಯ ನೀರು ಹರಿಯುತ್ತಿದೆ. ಕೊಳಚೆ ನೀರು ಕೆಲ ಮನೆಗಳಿಗೂ ನುಗ್ಗುತ್ತಿದೆ. ಶೋಚನೀಯ ಸ್ಥಿತಿಯಿಂದ ನಮ್ಮನ್ನು ಮುಕ್ತಿಗೊಳಿಸುವಂತೆ ಎಂದು ಪುರಸಭೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಬಿ.ಎಂ.ಶಿವಣ್ಣ ಬೇಸರ ವ್ಯಕ್ತಪಡಿಸಿದರು.