ಮೈಸೂರು: ‘ಮುಖ್ಯಮಂತ್ರಿ ಸ್ಥಾನಕ್ಕೆ ನಾನೂ ಒಬ್ಬ ಆಕಾಂಕ್ಷಿ. ಆದರೆ, ನನ್ನ ಆಸೆ ಈಡೇರುವುದು ಮುಖ್ಯವಲ್ಲ. ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು’ ಎಂದು ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಭಾನುವಾರ ಇಲ್ಲಿಹೇಳಿದರು.
ಮುಂದಿನ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯ ವಿಚಾರ ಕಾಂಗ್ರೆಸ್ನಲ್ಲಿ ಪ್ರತಿಧ್ವನಿಸಿದ್ದಕ್ಕೆ ಪ್ರತಿಕ್ರಿಯಿಸಿ,‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂಕಿ–ಸಂಖ್ಯೆ ಅತಿ ಮುಖ್ಯ. ಸಂಖ್ಯೆ ಇದ್ದರೆ ನಾನೇಮುಖ್ಯಮಂತ್ರಿಆಗಬಹುದು. ಆ ಅರ್ಹತೆಯನ್ನು ನಾನೂ ಇಟ್ಟುಕೊಂಡಿದ್ದೇನೆ’ ಎಂದರು.
‘ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ. ಅದಕ್ಕೆ ಎಲ್ಲರೂ ಬದ್ಧರಾಗಿದ್ದೇವೆ. ಜಮೀರ್ ಅಹ್ಮದ್ ಅವರು ಪಕ್ಷದ ಸಿದ್ಧಾಂತವನ್ನು ಸರಿಯಾಗಿ ತಿಳಿದು ಕೊಂಡಿಲ್ಲ. ಮುಖ್ಯಮಂತ್ರಿ ವಿಚಾರವನ್ನು ಈಗ ಮಾತನಾಡುವ ಅಗತ್ಯವಾದರೂ ಏನಿತ್ತು’ ಎಂದು ಪ್ರಶ್ನಿಸಿದರು.