ಮೈಸೂರು: ಇಲ್ಲಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಶುಕ್ರವಾರ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪಥಸಂಚಲನದ ತಾಲೀಮಿನಲ್ಲಿ 10 ತುಕಡಿಗಳು ಭಾಗಿಯಾದವು.
ಧ್ವಜಾರೋಹಣ ನೆರವೇರಿಸಿದ ನಂತರ ಅಶ್ವರೋಹಿದಳ, ನಗರ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಮಹಿಳಾ ಪೊಲೀಸ್ ತಂಡ, ಸಂಚಾರ ಪೊಲೀಸ್ ತಂಡ, ಪೊಲೀಸ್ ಬ್ಯಾಂಡ್, ಗೃಹರಕ್ಷಕ ಸಿಬ್ಬಂದಿ ಸೇರಿದಂತೆ 10 ತಂಡಗಳು ಪಥಸಂಚಲನ ನಡೆಸಿ, ಅತಿಥಿಗಳಿಗೆ ಗೌರವ ಸಮರ್ಪಿಸುವ ತಾಲೀಮು ನಡೆಯಿತು.
ಈ ಬಾರಿ ಎನ್ಸಿಸಿಯ ವಿವಿಧ ತುಕಡಿಗಳು, ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್ ತಂಡ ಹಾಗೂ ಶಾಲಾ ವಿದ್ಯಾರ್ಥಿಗಳ ತಂಡಗಳನ್ನು ಪಥಸಂಚಲನಕ್ಕೆ ಆಹ್ವಾನಿಸಿಲ್ಲದೇ ಇರುವುದರಿಂದ ಕೇವಲ 30 ನಿಮಿಷದಲ್ಲಿ ಕಾರ್ಯಕ್ರಮ ಮುಗಿಯುವ ನಿರೀಕ್ಷೆ ಇದೆ. ಪ್ರತಿ ವರ್ಷ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಬಾರಿ ನಡೆಯುವುದಿಲ್ಲ. ಕಾರ್ಯಕ್ರಮಕ್ಕೆ ಸಾರ್ವಜನಿಕರ ಮುಕ್ತ ಪ್ರವೇಶವನ್ನು ನಿರ್ಬಂಧಿಸಲಾಗಿದೆ.