ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಆಗಿ ಜೆಡಿಎಸ್ ಸದಸ್ಯೆ ರುಕ್ಮಿಣಿ ಮಾದೇಗೌಡ ಮತ್ತು ಉಪ ಮೇಯರ್ ಆಗಿ ಕಾಂಗ್ರೆಸ್ ಸದಸ್ಯ ಅನ್ವರ್ ಬೇಗ್ ಆಯ್ಕೆಯಾಗಿದ್ದಾರೆ.
ಬಿಜೆಪಿ ಲೆಕ್ಕಾಚಾರ ತಲೆಕೆಳಗಾಗಿದ್ದು, ಜೆಡಿಎಸ್–ಕಾಂಗ್ರೆಸ್ ಮೈತ್ರಿ ಮುಂದುವರಿದಿದೆ.
ಬುಧವಾರ ನಡೆದ ಚುನಾವಣೆಯಲ್ಲಿ ರುಕ್ಮಿಣಿ ಮಾದೇಗೌಡ, ಅನ್ವರ್ ಬೇಗ್ ತಲಾ 43 ಮತ ಗಳಿಸಿ ಗೆಲುವಿನ ನಗೆ ಬೀರಿದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಸುನಂದಾ ಪಾಲನೇತ್ರ, ಸಾತ್ವಿಕ್ ತಲಾ 26 ಮತಗಳಿಸಿ ಪರಾಭವಗೊಂಡರು.
ಕೊನೆ ಕ್ಷಣದವರೆಗೂ ಕುತೂಹಲ ಕೆರಳಿಸಿದ್ದ ಮೇಯರ್–ಉಪ ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ, ಮೂರೂ ಪಕ್ಷಗಳು ಬುಧವಾರವೂ ಸರಣಿ ಸಭೆ ನಡೆಸಿದವು. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡರೂ, ಮೈತ್ರಿ ನಿರ್ಧಾರವಾಗಿರಲಿಲ್ಲ.
ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ನ ಶಾಸಕರು, ವಿಧಾನ ಪರಿಷತ್ ಸದಸ್ಯರು, ಪಾಲಿಕೆ ಸದಸ್ಯರನ್ನು ಖುದ್ದು ಭೇಟಿ ಮಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಬಿಜೆಪಿಗೆ ಸಹಕರಿಸುವಂತೆ ಕೋರಿದ್ದರೂ ಕೊನೆ ಕ್ಷಣದಲ್ಲಿ ಬಿಜೆಪಿ–ಜೆಡಿಎಸ್ನ ಮೈತ್ರಿಕೂಟ ರಚನೆಯಾಗಲಿಲ್ಲ.
ಕುಮಾರಸ್ವಾಮಿಯನ್ನು ಭೇಟಿ ಮಾಡಿದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಮೊಬೈಲ್ನಲ್ಲಿ ಮಾತನಾಡಿಸಿದ್ದು, ಕಾಂಗ್ರೆಸ್– ಜೆಡಿಎಸ್ನ ಮೈತ್ರಿ ಮುಂದುವರಿಯಲು ಕಾರಣವಾಯಿತು ಎನ್ನಲಾಗಿದೆ.
ಈ ಹಿಂದಿನ ಒಪ್ಪಂದದಂತೆ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯು ಮೇಯರ್ ಸ್ಥಾನ ಅಲಂಕರಿಸಬೇಕಿತ್ತು. ಪಕ್ಷದೊಳಗಿನ ನಾಯಕತ್ವದ ಪೈಪೋಟಿಯೇ ಜೆಡಿಎಸ್ಗೆ ಮೇಯರ್ ಸ್ಥಾನ ಬಿಟ್ಟುಕೊಟ್ಟಿದೆ ಎಂಬ ಮಾತು ಕಾಂಗ್ರೆಸ್ ಪಾಳೆಯದಿಂದ ಕೇಳಿ ಬಂತು.