ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮೊಟ್ಟೆ ರಾಜಕಾರಣ' ನಿಲ್ಲಿಸಲು ಕೆ.ಎಸ್.ಶಿವರಾಮು ಆಗ್ರಹ

Last Updated 9 ಡಿಸೆಂಬರ್ 2021, 6:21 IST
ಅಕ್ಷರ ಗಾತ್ರ

ಮೈಸೂರು: ಶಾಲಾ ಮಕ್ಕಳಿಗೆ ಕೋಳಿ ಮೊಟ್ಟೆ ನೀಡುವುದಕ್ಕೆ ವಿರೋಧಿಸುವ 'ಮೊಟ್ಟೆ ರಾಜಕಾರಣ'ವನ್ನು ನಿಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಆಗ್ರಹಿಸಿದರು.

ಮಕ್ಕಳಿಗೆ ಕೋಳಿಮೊಟ್ಟೆ ನೀಡುವುದನ್ನು ವಿರೋಧಿಸುವುದು ವಿಕೃತ ಮನಸ್ಥಿತಿ. ಈ ಮೂಲಕ ಮಕ್ಕಳ ಪೌಷ್ಟಿಕಾಂಶವನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

ಮೊಟ್ಟೆ ನೀಡುವುದನ್ನು ವಿರೋಧಿಸಿ ಕೆಲವು ಮಠಾಧೀಶರು ಸಮಾವೇಶ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ. ಈ ರೀತಿ ರಾಜಕಾರಣ ಮಾಡುತ್ತಿರುವ ಮಠಾಧೀಶರು ಮೊದಲು ತಮ್ಮ ಕಾವಿ ಕಳಚಿ ನಂತರ ರಾಜಕಾರಣ ಮಾಡಲಿ ಎಂದು ಸವಾಲೆಸೆದರು.
ಈ ಮಠಾಧೀಶರು ತಮ್ಮ ಮಠಗಳಲ್ಲಿ ದೇವಸ್ಥಾನಗಳಲ್ಲಿ ಮೊಟ್ಟೆ ಸೇವಿಸುವವರು ಕಾಣಿಕೆ ನೀಡಬಾರದು ಎಂದು ಫಲಕ ಹಾಕಬೇಕು. ಮೊಟ್ಟೆ ಸೇವಿಸುವವರ, ಮಾರಾಟ ಮಾಡುವವರ ಕಾಣಿಕೆಗಳು ಇವರಿಗೆ ಬೇಕು. ಆದರೆ ಮೊಟ್ಟೆ ನೀಡುವುದು ಬೇಡ ಎನ್ನುವುದು ಸರಿಯಲ್ಲ ಎಂದು ಖಂಡಿಸಿದರು.

ಮೊಟ್ಟೆಯ ಜತೆಗೆ ಹಾಲು ಮತ್ತು ಹಣ್ಣನ್ನೂ ಸರ್ಕಾರ ನೀಡಬೇಕು. ಇದರಿಂದ ಮಕ್ಕಳ ಶಾಲಾ ಹಾಜರಾತಿ ಪ್ರಮಾಣ ಹೆಚ್ಚುತ್ತದೆ. ತನ್ನ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬಾರದು ಎಂದು ಆಗ್ರಹಿಸಿ ಡಿ. 10ರಂದು ಬೆಳಿಗ್ಗೆ 11.30 ಕ್ಕೆ ಪತ್ರ ಚಳವಳಿ ನಡೆಸಲಾಗುವುದು ಎಂದರು.

ಸವಿತಾ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್.ನಾಗೇಶ್ ಮಾತನಾಡಿ,‌'ಮಠಾಧಿಪತಿಗಳಿಗೆ ಬೇರೆ ಕೆಲಸ ಇಲ್ಲವೆ?' ಎಂದು ಪ್ರಶ್ನಿಸಿದರು. ಒಂದು ವೇಳೆ ಮಠಾಧೀಶರ ಬೇಡಿಕೆಗೆ ಮಣಿದು ಮೊಟ್ಟೆ ನೀಡುವುದನ್ನು ನಿಲ್ಲಿಸಿದರೆ ಪ್ರತಿಭಟನೆ ನಡೆಸಲಾಗುವುದು' ಎಂದು ಎಚ್ಚರಿಕೆ ನೀಡಿದರು.

ಕುಂಬಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್‌.ಪ್ರಕಾಶ, ಮಾತನಾಡಿ, ಮೊಟ್ಟೆ ವಿತರಣೆ ವಿರುದ್ಧ ಸಮಾವೇಶ ಮಾಡಲು ಹೊರಟಿರುವುದು ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಇದರ ಹಿಂದೆ ಸಚಿವರ ಕುಮ್ಮಕ್ಕು ಇದೆ ಎಂದು ಆರೋಪಿಸಿದರು.
ಮುಖಂಡರಾದ ರೋಹಿತ್, ಲೋಕೇಶ್ ಮಾದಾಪುರ, ಹರೀಶ್ ಮೊಗಣ್ಣಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT