ಬೆಟ್ಟದಪುರ: ಇಲ್ಲಿನ ಕೆಇಬಿ ವೃತ್ತದಲ್ಲಿ ಕಸಾಪ ವತಿಯಿಂದ ನಿರ್ಮಿಸಿದ ವಿಶ್ವಮಾನವ ಸಂದೇಶ ಸಾರುವ ಕುವೆಂಪು ಪುತ್ಥಳಿಯನ್ನು ಶಾಸಕ ಕೆ.ಮಹದೇವ್ ಮತ್ತು ಗಣ್ಯರು ಅನಾವರಣಗೊಳಿಸಿದರು. ಮತ್ತು ಈ ವೃತ್ತ ಇಂದಿನಿಂದ ಕುವೆಂಪು ವೃತ್ತ ಎಂದು ನಾಮಕರಣ ಮಾಡಲಾಯಿತು. ಇದೇ ಸಂದರ್ಭದಲ್ಲಿ ರಸ್ತೆ ವೃತ್ತಗಳ ನಾಮಫಲಕ ಅನಾವರಣ ಮಾಡಲಾಯಿತು.
ಮೆರವಣಿಗೆಯಲ್ಲಿ ಸಮ್ಮೇಳನಾಧ್ಯಕ್ಷ ಟಿ.ಸಿ ವಸಂತರಾಜೇ ಅರಸ್ ಅವರನ್ನು ಕ್ಷೇತ್ರ ಧರ್ಮಸ್ಥಳ ಮಹಿಳಾ ಸಂಘ ಹಾಗೂ ವಿವಿಧ ಮಹಿಳಾ ಸಂಘಗಳ ವತಿಯಿಂದ ಪೂರ್ಣಕುಂಭ ಸ್ವಾಗಿಸಲಾಯಿತು. ತಾ.ಪಂ.ಅಧ್ಯಕ್ಷೆ ಕೆ.ಆರ್.ನಿರೂಪಾ ಸಮ್ಮೇಳನದ ಮೆರವಣಿಗೆಗೆ ಚಾಲನೆ ನೀಡಿದರು.
ವಿವಿಧ ಕಲಾ ತಂಡಗಳ ವತಿಯಿಂದ ಪೂಜಾಕುಣಿತ, ವೀರಗಾಸೆ, ಡೊಳ್ಳುಕುಣಿತ, ಕೋಲಾಟ, ಕಂಸಾಳೆಗಳ ನೃತ್ಯ ಮೆರವಣಿಗೆಗೆ ಮೆರುಗು ನೀಡಿತ್ತು. ಸ್ಥಳೀಯ ಸರ್ಕಾರಿ ಮತ್ತು ಖಾಸಗಿ ಶಾಲೆಯ ಮಕ್ಕಳು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡು ರಂಗು ತಂದರು.
ಸಮ್ಮೇಳನದ ಅಂಗವಾಗಿ ಬೆಟ್ಟದಪುರ ಗ್ರಾಮವು ಮದುವಣಗಿತ್ತಿಯಂತೆ ಸಿಂಗರಿಸಿದ್ದ ಗ್ರಾಮಸ್ಥರು ಸಮ್ಮೇಳನಕ್ಕೆ ಸಹಕಾರ ನೀಡಿದ್ದರು.
ಇಲ್ಲಿನ ಅಕ್ಕಮಹಾದೇವಿ ಕ್ರೀಡಾಂಗಣದ ಸಿಡಿಲು ಮಲ್ಲಿಕಾರ್ಜುನಸ್ವಾಮಿ ಸಭಾಂಗಣದಲ್ಲಿ ಬೆಳಿಗ್ಗೆ 9 ಗಂಟೆಗೆ ರಾಷ್ಟ್ರಧ್ವಜವನ್ನು ಶಾಸಕ ಕೆ.ಮಹದೇವ್, ನಾಡಧ್ವಜವನ್ನು ಗ್ರಾ.ಪಂ ಅಧ್ಯಕ್ಷೆ ಯಶೋಧಮ್ಮ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜವನ್ನು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಗೊರಳ್ಳಿ ಜಗದೀಶ್ ಧ್ವಜಾರೋಹಣ ನೆರವೇರಿಸಿದರು.
ಚನ್ನಬಸವ ದೇಶಿ ಕೇಂದ್ರ ಸ್ವಾಮೀಜಿ ಮಾತನಾಡಿ, ‘ಕನ್ನಡ ಮಠದಲ್ಲಿ ಅಕ್ಷರ ಜಾತ್ರೆಯು ತುಂಬ ಅಚ್ಚುಕಟ್ಟಾಗಿ ನಡೆಯುತ್ತಿದ್ದು, ಎಲ್ಲರ ಆಶಯದಂತೆ ಯಾವುದೇ ವಿಘ್ನವಿಲ್ಲದೇ ಯಶಸ್ವಿಯಾಗಿ ಪೂರ್ಣಗೊಳಿಸುವಲ್ಲಿ’ ಎಂದು ಶುಭ ಹಾರೈಸಿದರು.
ವಸ್ತು ಪ್ರದರ್ಶನ: ಕೃಷಿ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಪುಸ್ತಕ ಮಾರಾಟ ಕೇಂದ್ರಗಳಿಂದ ವಸ್ತು ಪ್ರದರ್ಶನವನ್ನು ಶಾಸಕ ಕೆ. ಮಹದೇವ್ ಮತ್ತು ಗಣ್ಯರು ಉದ್ಘಾಟಿಸಿದರು.