ಚಿರತೆ ಕಣ್ಣಿಗೆ ತಿವಿದು ಪಾರಾದ ಬಾಲಕ

ಮೈಸೂರು: ತಾಲ್ಲೂಕಿನ ಕಡಕೊಳ ಸಮೀಪದಲ್ಲಿ, ತನ್ನ ಮೇಲೆ ದಾಳಿ ಮಾಡಿದ ಚಿರತೆಯ ಕಣ್ಣಿಗೆ ತಿವಿದು ಬಾಲಕನೊಬ್ಬ ಸೋಮವಾರ ಪಾರಾಗಿದ್ದಾನೆ.
ಗ್ರಾಮದ ನಂದನ್ ಕುಮಾರ್ (12), ತಮ್ಮ ಜಮೀನಿನಲ್ಲಿನ ಹಸುವಿಗೆ ಹುಲ್ಲು ಹಾಕಲು ತೆರಳುತ್ತಿದ್ದಾಗ ಚಿರತೆ ದಾಳಿ ಮಾಡಿದೆ. ಕುತ್ತಿಗೆ, ತೋಳಿಗೆ ಪರಚಿ ಗಾಯಗೊಳಿಸಿದೆ. ಈ ಸಂದರ್ಭದಲ್ಲಿ ಬಾಲಕನು ಚಿರತೆಯ ಕಣ್ಣಿಗೆ ಬೆರಳಿನಿಂದ ತಿವಿದಿದ್ದಾನೆ. ತಕ್ಷಣ, ಚಿರತೆ ಈತನನ್ನು ಬಿಟ್ಟು ಪರಾರಿಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗಾಯಗೊಂಡಿರುವ ಬಾಲಕನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆರ್ಎಫ್ಒ ಗಿರೀಶ್, ‘ಸಾಮಾನ್ಯವಾಗಿ ಚಿರತೆಗಳು ಮನುಷ್ಯರ ಮೇಲೆ ದಾಳಿ ನಡೆಸುವುದಿಲ್ಲ. ಜಿಲ್ಲೆಯಲ್ಲಿ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದ ಮೊದಲ ಪ್ರಕರಣ ಇದಾಗಿದೆ. ಬಾಲಕ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ. ಚಿರತೆಯ ಕಣ್ಣಿಗೆ ಬೆರಳು ಹಾಕಿದ ಕುರಿತು ಯಾವುದೇ ಮಾಹಿತಿ ಇಲ್ಲ’ ಎಂದು ಹೇಳಿದರು.
ಕೆಪಿಟಿಸಿಎಲ್ಗೆ ಸೇರಿದ 140 ಎಕರೆ ಖಾಲಿ ಜಾಗದಲ್ಲಿ ಕುರುಚಲು ಗಿಡಗಳು ದಟ್ಟವಾಗಿ ಬೆಳೆದಿವೆ. ಇದರ ಪಕ್ಕದಲ್ಲೇ ಇರುವ ಜಮೀನಿಗೆ ಬಾಲಕ ತೆರಳುತ್ತಿದ್ದ. ಕುರುಚಲು ಗಿಡಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಕೆಪಿಟಿಸಿಎಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.