ಮೈಸೂರು: ತಾಲ್ಲೂಕಿನ ಜಯಪುರ ಗ್ರಾಮದ ಸಮೀಪ ಕೋಳಿ ಫಾರಂವೊಂದಕ್ಕೆ ಮಂಗಳವಾರ ನುಗ್ಗಿದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.
ಕೋಳಿ ಫಾರಂ ಒಳಗೆ ನುಸುಳಿದ್ದ ಚಿರತೆಯನ್ನು ಬೆಳಿಗ್ಗೆ 6 ಗಂಟೆ ಸುಮಾರಿನಲ್ಲಿ ಕಂಡ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದರು.
ಆರ್ಎಫ್ಒಗಿರೀಶ್ ನೇತೃತ್ವದಲ್ಲಿ ಸ್ಥಳಕ್ಕೆ ಬಂದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಪಶುವೈದ್ಯ ವಸೀಂ ಅವರು ಅರಿವಳಿಕೆ ಚುಚ್ಚುಮದ್ದು ನೀಡಿ ಚಿರತೆಯನ್ನು ಸೆರೆ ಹಿಡಿದರು.
'ಮೂರರಿಂದ ಮೂರೂವರೆ ವರ್ಷ ವಯಸ್ಸಿನ ಹೆಣ್ಣು ಚಿರತೆ ಇದಾಗಿದ್ದು, ಸದ್ಯ ಚಿರತೆ ಆರೋಗ್ಯವಾಗಿದೆ. ಕೆಲವೇ ಗಂಟೆಗಳಲ್ಲಿ ಇದನ್ನು ಕಾಡಿನೊಳಗೆ ಬಿಡಲಾಗುವುದು' ಎಂದು ಡಿಸಿಎಫ್ ಕಮಲಾ ಕರಿಕಾಳನ್ ಪ್ರಜಾವಾಣಿಗೆ ತಿಳಿಸಿದರು.