ಮೈಸೂರು: ಬೆಂಗಳೂರಿನಲ್ಲಿ ಗುರುವಾರ ನಿಧನರಾದ ಸಾಹಿತಿ ಮಳಲಿ ವಸಂತ ಕುಮಾರ್ ಕೇವಲ ಸಾಹಿತಿ, ಪ್ರಾಧ್ಯಾಪಕರಷ್ಟೇ ಆಗಿರಲಿಲ್ಲ. ಸಾಹಿತ್ಯ ಕೃಷಿ ಜೊತೆಗೆ ತೋಟಗಾರಿಕಾ ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ಇವರು ನಿರತರಾಗಿದ್ದರು.
ನಗರ ಹೊರವಲಯದ ಕಳಲವಾಡಿ ಸಮೀಪ ಮೂರು ಎಕರೆಯಷ್ಟು ಭೂಮಿಯಲ್ಲಿ ಹಲವು ಬಗೆಯ ಹಣ್ಣಿನ ಮರಗಳನ್ನು ಬೆಳೆಸಿದ್ದರು. ತೆಂಗು, ಹಲಸಿನ ಜತೆಗೆ 8 ತಳಿಗಳ ಮಾವಿನ ಮರ ಬೆಳೆಸಿ ಪೋಷಣೆ ಮಾಡುತ್ತಿದ್ದರು.
ಸಪೋಟ, ಸೀಬೆ, ಬಟರ್ಫ್ರೂಟ್, ರಾಮಫಲ, ಸೀತಾಫಲ, ಹನುಮಫಲ, ಕಮರಕ ದ್ರಾಕ್ಷಿಗಳನ್ನು ಇವರು ಬೆಳೆಸಿದ್ದರು. ಸೇಬು ಕೃಷಿಯ ಪ್ರಯತ್ನ ವನ್ನೂ ನಡೆಸಿದ್ದರು ಎಂದು ಇವರ ಪುತ್ರಿ ರೂಪಾ ಮಳಲಿ ನೆನಪಿಸಿಕೊಂಡರು.
ಹಣ್ಣಿನ ಮರಗಳ ಮಧ್ಯೆ ಸಾವಯವ ಪದ್ಧತಿಯಲ್ಲಿ ತರಕಾರಿಗಳನ್ನು ಬೆಳೆಯುತ್ತಿ ದ್ದರು. ತರಕಾರಿಯ ಪ್ರಮಾಣ ಹೆಚ್ಚಾದರೆ ಅದನ್ನು ಸಮೀಪದ ಸಾವಯವ ಅಂಗಡಿಗೆ ಮಾರಾಟ ಮಾಡುತ್ತಿದ್ದರು.
ಕೋಲಾಟದಲ್ಲಿ ಅತೀವ ಆಸಕ್ತಿ ಹೊಂದಿದ್ದ ಇವರು, ನಾಟಕದಲ್ಲೂ ಅಭಿನಯಿಸಿದ್ದರು. ಕರ್ನಾಟಕ ವಿಚಾರ ವೇದಿಕೆ ಸೇರಿದಂತೆ ಹಲವು ಬಗೆಯ ಸಂಘಟನೆಗಳನ್ನು ಸಂಘಟಿಸಿದ್ದ ಇವರು, ಹಾಸನದ ಸ್ನಾತಕೋತ್ತರ ಪದವಿ ವಿಭಾಗದ ಬೆಳವಣಿಗೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.