ಮೇಲುಕೋಟೆ: ಮೇಲುಕೋಟೆಯ ಕೃಷ್ಣರಾಜಮುಡಿ ಬ್ರಹ್ಮೋತ್ಸವದಲ್ಲಿ ಮೈಸೂರು ಮೂಲದ ವಿಭಾಗೀಯ ಆಯುಕ್ತರ ಕುಟುಂಬದ ಸದಸ್ಯರು ಪರ್ಕಾವಣೆಯಲ್ಲಿ ಮಾಸ್ಕ್ ಧರಿಸದೆಯೇ ಭಾಗಿಯಾಗಿ ಕಿರೀಟ ಮತ್ತು ಆಭರಣ ವೀಕ್ಷಿಸಿರುವುದು ವಿವಾದಕ್ಕೆ ಕಾರಣವಾಗಿದೆ.
65 ವರ್ಷ ಮೇಲ್ಪಟ್ಟ ಅರ್ಚಕರಿಗೆ ಹಾಗೂ ಸ್ಥಾನೀಕರಿಗೆ ಖಜಾನೆಯಿಂದ ಬಂದ ಕಿರೀಟ ನೀಡಿ ನಿಯಮ ಉಲ್ಲಂಘನೆ ಮಾಡಲಾಗಿದೆ. ಉತ್ಸವದ ಹಿಂದಿನ ದಿನವೇ ಮಂಡ್ಯ ಜಿಲ್ಲಾ ಖಜಾನೆಯಿಂದ ಕಿರೀಟ ಆಭರಣ ತಂದು ಪರ್ಕಾವಣೆ ಮಾಡಿ ದೇವಾಲಯಕ್ಕೆ ನೀಡಿದ ಅಧಿಕಾರಿಗಳು ಸಂಪ್ರದಾಯಕ್ಕೆ ತಿಲಾಂಜಲಿ ನೀಡಿರುವ ಕ್ರಮದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಎಡೆ ಮಾಡಿದೆ.
ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದ ಪದ್ಧತಿಯಂತೆ ದೇಶಿಕರ ಸನ್ನಿಧಿಯಲ್ಲಿ ಪರ್ಕಾವಣೆ ನಡೆಸುವ ನಿಯಮ ಉಲ್ಲಂಘಿಸಿ ಪರ್ಕಾವಣೆಯನ್ನು ಚೆಲುವ ನಾರಾಯಣಸ್ವಾಮಿ ದೇವಾಲಯದಲ್ಲಿ ನಡೆಸಿದ್ದು, ಪರಕಾಲ ಮಠದ ಹಕ್ಕು ಕಸಿದಂತಾಗಿದೆ ಎಂದು ಭಕ್ತರು ಆರೋಪಿಸಿದ್ದಾರೆ.
ಮೊದಲ ಬಾರಿಗೆ ಪರ್ಕಾವಣೆಯ ಸುದ್ದಿ ಮಾಡಲು ಬಂದ ಮಾಧ್ಯಮದವರಿಗೂ ನಿರ್ಬಂಧ ಹಾಕಿದ ದೇಗುಲದ ಇಒ ಅಧಿಕಾರಿಗಳ ಕುಟುಂಬ ಫೋಟೋ ತೆಗೆಯಲು ಅವಕಾಶ ನೀಡಿರುವುದಕ್ಕೂ ವಿರೋಧ ವ್ಯಕ್ತವಾಗಿದೆ.