ಹುಣಸೂರು: ಜೋಡಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ವ್ಯಕ್ತಿಯನ್ನು ಪಿರಿಯಾಪಟ್ಟಣದಲ್ಲಿ ಮೊಬೈಲ್ ಕರೆ ಆಧರಿಸಿ ಬಂಧಿಸಲಾಗಿದೆ ಎಂದು ಸರ್ಕಲ್ ಇನ್ ಸ್ಪೆಕ್ಟರ್ ಪೂವಯ್ಯ ತಿಳಿಸಿದರು.
ಘಟನೆ ವಿವರ: ಆ.28 ರಂದು ಹುಣಸೂರು ತಾಲ್ಲೂಕಿನ ಗೌಡನಕಟ್ಟೆ ಗ್ರಾಮದ ಸರ್ವೆ ನಂ 25ರ ದೇವೇಂದ್ರ ಎಂಬುವವರ ಹೊಲದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಅವಷೇಶ ಪತ್ತೆಯಾಗಿತ್ತು. ಈ ಸಂಬಂಧ ತನಿಖೆ ಕೈಗೊಂಡು ವಿಚಾರಣೆ ಹಂತದಲ್ಲಿ ಸತ್ತ ವ್ಯಕ್ತಿಯೂ ಮಾನವ ಮಾನವ ಅಲಿಯಾಸ್ ರಾಜಪ್ಪ (38) ಎಂದು ತಿಳಿದುಬಂದಿತ್ತು.
ಈ ಘಟನೆಯಲ್ಲಿ ಮುನಿಯಪ್ಪ ಮತ್ತು ರಾಜು ಎಂಬ ಸಹೋದರರು ಮುಖ್ಯ ಆರೋಪಿಯಾಗಿದ್ದು, ಇವರು ದೇವಸ್ಥಾನಗಳಲ್ಲಿ ಹುಂಡಿ ಒಡೆದು ಹಣ ಕಳ್ಳತನ ಮಾಡುವುದು ವೃತ್ತಿಯಾಗಿತ್ತು. ಗೌಡನಕಟ್ಟೆ ಘಟನೆಯಲ್ಲಿ ಮನಸ್ತಾಪ ಎದುರಾದ ಬಳಿಕ ಮಾನವನನ್ನು ಕೊಲೆ ಮಾಡಿ ಸುಟ್ಟು ಹಾಕಿದ್ದರು.
ಮತ್ತೊಂದು ಕೊಲೆ: ಆರೋಪಿ ಸಹೋದರರಾದ ಮುನಿಯಪ್ಪ ಮತ್ತು ರಾಜು ಇಬ್ಬರು ಕಾಲ್ನಡಿಗೆಯಲ್ಲಿ ವಿವಿಧ ಸ್ಥಳದಲ್ಲಿ ವಾಸ್ತವ್ಯ ಹೂಡಿದ್ದರು. ಆರೋಪಿ ಸ್ವಂತ ಮೊಬೈಲ್ ಇಲ್ಲದ ಕಾರಣ, ತನ್ನ ಸಂಬಂಧಿಕರಿಗೆ ದಾರಿಹೋಕರ ಫೋನ್ ಮೂಲಕ ಕರೆ ಮಾಡುತ್ತಿದ್ದ. ಈ ಮಧ್ಯೆ ಆರೋಪಿ ಮುನಿಯಪ್ಪ ತನ್ನ ಚಿಕ್ಕಪ್ಪನ ಮಗಳು ಪೂಜಾಳಿಗೆ ದೂರವಾಣಿ ಕರೆ ಮಾಡಿದ ಖಚಿತ ಮಾಹಿತಿ ಆಧರಿಸಿ, ವಿಚಾರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದರು.
ಕಾರ್ಯಾಚರಣೆಯಲ್ಲಿ ಪ್ರಭಾಕರ್, ಬೀರೇಗೌಡ, ಗಣೇಶ್, ಮಂಜುನಾಥ್, ಮಜಾಜ್, ಶಿವರಾಜ್ ಇದ್ದರು.