ಮೈಸೂರು: ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಮತ್ತು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದೆ.
ವಿಧಾನಸಭಾ ಕಾಗದ ಪತ್ರಗಳ ಸಮಿತಿಯ ಅಧ್ಯಕ್ಷ ಸಾ.ರಾ. ಮಹೇಶ್ ನೇತೃತ್ವದಲ್ಲಿ ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಸಭೆ ನಡೆಯಿತು. ರೋಹಿಣಿ ಸಿಂಧೂರಿ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯ ಆರಂಭದಲ್ಲಿ ಮಾತನಾಡಿದ ಸಾ.ರಾ.ಮಹೇಶ್, ‘ವಿಧಾನ ಸಭೆಯ ಸ್ಪೀಕರ್ ಪರವಾಗಿ ಸಮಿತಿಯ ಸದಸ್ಯರು ಇಲ್ಲಿಗೆ ಬಂದಿದ್ದಾರೆ. ಜಿಲ್ಲಾಧಿಕಾರಿ, ಎಸ್ಪಿ ಅಥವಾ ಪೊಲೀಸ್ ಆಯುಕ್ತರು ಸಮಿತಿಯ ಸದಸ್ಯರನ್ನು ಸ್ವಾಗತಿಸಬೇಕಿತ್ತು. ಆದರೆ ಇಲ್ಲಿ ಬರಮಾಡಿಕೊಳ್ಳಲು ಯಾರೂ ಇರಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಸ್ಕ್ ತೆಗೆದು ಮಾತನಾಡಿ: ಸಭೆಯ ಆರಂಭದಲ್ಲಿ ಎಲ್ಲ ಅಧಿಕಾರಿಗಳು ಪರಿಚಯ ಮಾಡಿಕೊಂಡರು. ರೋಹಿಣಿ ಸಿಂಧೂರಿ ಕೂಡಾ ತಮ್ಮನ್ನು ಪರಿಚಯ ಮಾಡಿಕೊಂಡು, ‘ಈ ಸಭೆಯಲ್ಲಿ ನನ್ನ ಕಚೇರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆ ಇಲ್ಲ. ನಾನು ಇರಬೇಕೇ, ಬೇಡವೇ’ ಎಂದು ಕೇಳಿದರು.
ಜಿಲ್ಲಾಧಿಕಾರಿಯ ಮಾತು ಸರಿಯಾಗಿ ಕೇಳಿಸದಿದ್ದಕ್ಕೆ ಶಾಸಕರು, ‘ಮಾಸ್ಕ್ ತೆಗೆದು ಮಾತನಾಡಿರಿ’ ಎಂದರು. ಆದರೆ ಜಿಲ್ಲಾಧಿಕಾರಿ, ‘ಮಾಸ್ಕ್ ತೆಗೆಯಲ್ಲ ಸರ್, ಮಾಸ್ಕ್ ತೆಗೆಯಬಾರದು’ ಎಂದು ಹೇಳಿ ಮಾತು ಮುಂದುವರಿಸಿದರು.